ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿರುವ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನವು ಧಾರ್ಮಿಕ ಶ್ರದ್ದಾ ಕೇಂದ್ರವಾಗಿದೆ. ಈ ಗ್ರಾಮವು ತನ್ನಲ್ಲಿ ಇರುವ ಲಕ್ಷ್ಮಿ ದೇವಸ್ಥಾನದಿಂದಾಗಿ ಚಿರಪರಿಚಿತವಾಗಿದೆ.
ಲಕ್ಷ್ಮಿ ಎಂದ ಕೂಡಲೇ ನೆನಪಿಗೆ ಬರುವುದು ಕೊಲ್ಹಾಪುರ ಲಕ್ಷ್ಮಿ. ಆದರೆ, ಗೊರವನಹಳ್ಳಿ ಕರ್ನಾಟಕದ ಕೊಲ್ಹಾಪುರವಾಗಿ ಬೆಳೆಯುತ್ತಿದೆ. ಲಕ್ಷ್ಮಿಗೆ ಮೀಸಲಾದ ಕರ್ನಾಟಕದ ಏಕೈಕ ಜನಪ್ರಿಯ ಕ್ಷೇತ್ರವೆನ್ನುವ ಹಿರಿಮೆಗೆ ಗೊರವನಹಳ್ಳಿ ಪಾತ್ರವಾಗಿದೆ.
ಮಹಾಲಕ್ಷ್ಮಿ. ಅನಾದಿ ಕಾಲದಿಂದಲೂ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾ ಬಂದಿರೋ, ಭಾಗ್ಯಲಕ್ಷ್ಮಿ. ಗೊರವನ ಹಳ್ಳಿಯಲ್ಲಿ ನೆಲೆಸುವ ಮೂಲಕ, ಗೊರವನಹಳ್ಳಿಯನ್ನು ಪುಣ್ಯ ಭೂಮಿಯನ್ನಾಗಿ ಮಾಡಿದ ಮಹಾತಾಯಿ. ಗೊರವನ ಹಳ್ಳಿ ಮಹಾಲಕ್ಷ್ಮಿ ಅಂದ್ರೆ ಸಾಕು. ಭಕ್ತಿ ಭಾವ ಉಕ್ಕಿ ಹರಿಯುತ್ತೆ. ಅಮ್ಮಾ ತಾಯಿ. ನನ್ನ ಸಂಕಷ್ಟ ದೂರ ಮಾಡಮ್ಮ ಅಂತ ಬೇಡಿಕೊಂಡರೆ ಸಾಕು. ಈ ಮಹಾತಾಯಿ ಅವರನ್ನು ಉದ್ಧರಿಸ್ತಾಳೆ. ಎಲ್ಲರ ಸಂಕಷ್ಟಗಳನ್ನು ನಿವಾರಿಸ್ತಾಳೆ. ಕಲಿಯುಗದಲ್ಲೂ ಕಾಣಿಸಿಕೊಳ್ಳೋ ಈ ಕರುಣಾಮಯಿ, ಕಂಗಾಲದವರಿಗೆ ಕರುಣೆ ತೋರಿ ಕೃಪೆ ನೀಡುತ್ತಾಳೆ. ಇದೇ ಕಾರಣಕ್ಕೆ ಲಕ್ಷಾಂತರ ಮಂದಿ ಈ ಗೊರವನಹಳ್ಳಿಗೆ ಬಂದು ಮಹಾಲಕ್ಷ್ಮಿಯ ಪಾದಕ್ಕೆ ಬಿದ್ದು ಧನ್ಯರಾಗ್ತಾರೆ.
ಈ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗು ಭಾನುವಾರಗಳಂದು ವಿಶೇಷ ಪೂಜೆ ಇರುತ್ತದೆ. ದೇವಾಲಯದ ವತಿಯಿಂದ ಇಲ್ಲಿ ಪ್ರತಿದಿನ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದವರು ಇಲ್ಲಿ ಒಂದು ಕಲ್ಯಾಣ ಮಂಟಪವನ್ನು ನಿರ್ಮಿಸಿದ್ದಾರೆ. ಸಾರ್ವಜನಿಕರು ಅಗತ್ಯ ಹಣವನ್ನು ನೀಡಿ ಇದರ ಉಪಯೋಗ ಪಡೆದುಕೊಳ್ಳಬಹುದು.
ಮಹಾಲಕ್ಷ್ಮಿ ಈ ಗೊರವನಹಳ್ಳಿಯಲ್ಲಿ ಬಂದು ನೆಲೆಸಿದ್ದರ ಹಿಂದೆ ಒಂದು ರೋಚಕ ಕಥೆ ಇದೆ. ತುಮಕೂರಿನ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಅಬ್ಬಯ ಅನ್ನೋರಿಗೆ ಒಂದು ಹೆಣ್ಣಿನ ಅಶರೀರವಾಣಿಯೊಂದು ಕೇಳಿಸಿತ್ತು. ನಾನು ನಿಮ್ಮ ಮನೆಗೆ ಬರುತ್ತೀನಿ. ಕರ್ಕೊಂಡು ಹೋಗು ಅಂತ, ಆ ಅಶರೀರವಾಣಿ ಹೇಳಿತ್ತು. ಆ ಆಸರೀರವಾಣಿ ಪದೇ ಪದೇ ಕೇಳಿಸ್ತಾ ಇತ್ತು. ಇದರಿಂದ ವಿಚಲಿತನಾದ ಅಬ್ಬಯ್ಯ, ತನಗಾದ ಅನುವವನ್ನು ತನ್ನ ತಾಯಿಗೆ ಹೇಳಿದರು. ಇನ್ನೊಮ್ಮೆ ಆ ಅಶರೀರವಾಣಿ ಕೇಳಿಸಿದರೆ, ನೀನು ದೆವ್ವವಾದ್ರೆ, ಅಲ್ಲೇ ಇರು. ದೇವರಾದ್ರೆ ಬಾ ಅಂತ ಹೇಳು ಅಂತ, ಅಬ್ಬಯ್ಯನ ತಾಯಿ ಹೇಳಿದರು. ತಾಯಿಯ ಮಾತಿಗೆ ಒಪ್ಪಿಕೊಂಡ ಅಬ್ಬಯ್ಯ ತನ್ನ ಕೆಲಸವನ್ನು ಮುಂದುವರೆಸಿದ. ಮತ್ತೆ ಅದೇ ಆಶರೀರವಾಣಿ ಕೇಳಿಸ್ತು ಅನ್ನಯ್ಯನಿಗೆ. ತಾಯಿ ಹೇಳಿದಂತೆ, ದೆವ್ವವಾದ್ರೆ ಬರಬೇಡ. ದೇವರಾದ್ರೆ ಬಾ ಅಂತ ಹೇಳಿದ. ಮಹಾಲಕ್ಷ್ಮಿ ಕೊಳದಿಂದ ಎದ್ದು ಬಂದು ಅಬ್ಬಯ್ಯನ ಮನೆ ಸೇರಿದಳು. ಅಂದಿನಿಂದ ಗೊರವನಹಳ್ಳಿ ಪವಿತ್ರ ಪುಣ್ಯ ಕ್ಷೇತ್ರವಾಗಿ ಪರಿವರ್ತನೆಯಾಯಿತು.
1925ರ ನಂತರದಲ್ಲಿ ಮಹಾಲಕ್ಷ್ಮಿಯ ದೇಗುಲ ಜೀರ್ಣೋದ್ಧಾರವಾಯಿತು. ಗ್ರಾಮಸ್ಥರ ಮನವೊಲಿಸಿ ಕಮಲಮ್ಮನವರು ದೇಗುಲದ ನಿರ್ಮಾಣ ಮಾಡಿದರು. ಇದರಿಂದಾಗಿ ಮಹಾಲಕ್ಷ್ಮಿ ಸಂತುಷ್ಠಳಾದಳು. ಬೇಡಿ ಬಂದ ಲಕ್ಷಾಂತರ ಮಂದಿ ಭಕ್ತರನ್ನು ಅನುಗ್ರಹಿಸುವ ಮೂಲಕ, ಎಲ್ಲೆಡೆ ಮನೆ ಮಾತಾದಳು. ಇದೇ ಕಾರಣಕ್ಕೆ, ಲಕ್ಷಾಂತರ ಮಂದಿ ಈ ಮಹಾಮಾತೆಯನ್ನು ನೋಡೋಕೆ, ಗೊರವನಹಳ್ಳಿಗೆ ಬರ್ತಾ ಇದ್ದಾರೆ. ಬಂದ ಭಕ್ತರು ಮಹಾಲಕ್ಷ್ಮಿಗೆ ತಮ್ಮ ಕೈಲಾದ ಕಾಣಿಕೆಯನ್ನು ನೀಡಿ ಹೋಗ್ತಾರೆ. ಚಿನ್ನಾಭರಣಗಳನ್ನು ದೇವಿಗೆ ಅರ್ಪಿಸಿ ಹೋಗ್ತಾರೆ.
ಗ್ರಾಮದ ಕಮಲಮ್ಮ ಎಂಬುವವರು ಈ ದೇವಾಲಯವನ್ನು ನಿರ್ಮಿಸಿದರು ಹಾಗು ಅದರ ಉಸ್ತುವಾರಿ ವಹಿಸಿಕೊಂಡಿದ್ದರು. ಅವರ ಮರಣಾ ನಂತರ ಅವರ ಪುತ್ರರಾದ ಪ್ರಸನ್ನರವರು ಆಡಳಿತ ನೋಡಿಕೊಳ್ಳುತ್ತಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಿಂದ ಗೊರವನಹಳ್ಳಿ 10 ಕಿ ಮೀ ದೂರದಲ್ಲಿದೆ. ಬೆಂಗಳೂರಿನಿಂದ ಗೊರವನಹಳ್ಳಿಗೆ ನೇರವಾಗಿ ಬಸ್ಸಿದೆ. ತುಮಕೂರಿಗೆ ಹೋಗಿ(ಬೆಂಗಳೂರಿನಿಂದ ತುಮಕೂರಿಗೆ 67 ಕಿಮಿ) ಅಲ್ಲಿಂದ ಕೊರಟಗೆರೆ ಮೂಲಕವೂ ತೆರಳಬಹುದು. ತುಮಕೂರು ಹಾಗೂ ಕೊರಟಗೆರೆ ನಡುವೆ 25 ಕಿಮಿ ದೂರವಿದೆ. ಗೊರವನಹಳ್ಳಿಯ ವಸತಿಗೃಹಗಳಲ್ಲೇ ಕಳೆಯಬಹುದು.
ಗೊರವನಹಳ್ಳಿ ಪಕ್ಕದಲ್ಲಿಯೇ ಕಣ್ತುಂಬಲಿಕ್ಕೆ ತೀತಾ ಜಲಾಶಯವಿದೆ. ಜಯಮಂಗಲಿ ನದಿಯಿದೆ. ದೇವರಾಯನದುರ್ಗ(ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ), ವೀರಾಪುರ(ಶ್ರೀನಿವಾಸ) ದೇವಾಲಯಗಳಿವೆ. ಸಮೀಪದಲ್ಲಿ ಸಿದ್ಧಗಂಗೆಯಿದೆ. ಶಾಂತಲೆಯನ್ನು ನೆನಪಿಸುವ ಶಿವಗಂಗೆಯಿದೆ. ಸಿದ್ದರು ಬದುಕಿದ ಸಿದ್ಧರ ಬೆಟ್ಟವಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos