ಭಕ್ತಿ-ಭವಿಷ್ಯ

ಆಂಜನೇಯ ಸ್ವಾಮಿ ನೆಲೆಸಿರುವ ಶ್ರೀ ಕ್ಷೇತ್ರ ಬೆಲಗೂರು

Srinivas Rao BV
ಬೆಲಗೂರು, ಅರಸಿಕೆರೆ ಹಾಗೂ ಹೊಸದುರ್ಗದ ನಡುವೆ ಇರುವ ಇರುವ ಸಣ್ಣ ಗ್ರಾಮ. ಆದರೆ ಅಧ್ಯಾತ್ಮಿಕ ದೃಷ್ಟಿಯಿಂದ ಅತ್ಯಂತ ಪ್ರಭಾವಿ ಕ್ಷೇತ್ರವಾಗಿದ್ದು ಸಾಕ್ಷಾತ್ ಹನುಮಂತ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. 
ಈ ಶ್ರೀ ಕ್ಷೇತ್ರಕ್ಕೆ ಸುಮಾರು 750 ವರ್ಷಗಳ ಭವ್ಯ ಇತಿಹಾಸ ಇದ್ದು, ಹನುಮಂತನ ಆರಾಧಕರಾಗಿದ್ದ ಸಂತ ವ್ಯಾಸರಾಯರು ಈ ಕ್ಷೇತ್ರದಲ್ಲಿ ವೀರ ಪ್ರತಾಪ ಆಂಜನೇಯನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಆದರೆ ಕಾಲಾನುಕ್ರಮದಲ್ಲಿ ಈ ಕ್ಷೇತ್ರ ಶ್ರೀ ಕ್ಷೇತ್ರವಾಗಿ ಮಾರ್ಪಟ್ಟಿತು. ಈಗ ಬಿಂದು ಮಾಧವ ಶರ್ಮ ಎಂಬ ಅವಧೂತರು ಶ್ರೀ ಕ್ಷೇತ್ರದಲ್ಲಿ ಹನುಮಂತನ ಆರಾಧರಾಗಿದ್ದಾರೆ. 
ಬೆಲಗೂರು ಕ್ಷೇತ್ರಕ್ಕೆ ಭೇಟಿ ನೀಡುವ ಧಾರ್ಮಿಕ ಜಿಜ್ಞಾಸುಗಳಿಗೆ ಅವಧೂತರಾದ ಬಿಂದು ಮಾಧವ ಶರ್ಮರು ಸದಾ ಮಾರ್ಗದರ್ಶಕರಾಗಿದ್ದು, ಸಹಸ್ರಾರು ಭಕ್ತರು ಬೆಲಗೂರು ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಬಿಂದು ಮಾಧವ ಶರ್ಮ ಅವಧೂತರ ಬಳಿ ತಮ್ಮ ಜಿಜ್ಞಾಸೆಗಳಿಗೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. 
ಬೆಲಗೂರು ಕ್ಷೇತ್ರದಲ್ಲಿ ವೀರ ಪ್ರತಾಪ ಆಂಜನೇಯ ಸ್ವಾಮಿಯಷ್ಟೇ ಅಲ್ಲದೇ ಶಿವ, ವಿಷ್ಣು ದೇವಾಲಯಗಳೂ ಇದ್ದು, ಪ್ರತಿ ಹುಣ್ಣಿಮೆಯ ದಿನದಂದು ವಿಶೇಷ ಪೂಜೆ, ಹೋಮಗಳು ನಡೆಯುವುದು ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ. ಪ್ರಶಾಂತ ವಾತವಾರಣವಿರುವ ಬೆಲಗೂರಿನ ಆಂಜನೇಯ ಸ್ವಾಮಿಯ ದರ್ಶನದಿಂದ ಅನೇಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವ ಉದಾಹರಣೆಗಳು ಸಾಕಷ್ಟಿದ್ದು, ನಾಸ್ತಿಕರೂ ಸಹ ಕ್ಷೇತ್ರದ ಮಹಿಮೆಗೆ ಮಾರುಹೋಗಿರುವ ಅನೇಕ ನಿದರ್ಶನಗಳಿದ್ದು, ಬೆಲಗೂರು ಕ್ಷೇತ್ರ ಹನುಮಂತನ ಸಾನ್ನಿಧ್ಯವಿರುವ ಕರ್ನಾಟಕದಲ್ಲಿನ ಪವಿತ್ರ ಕ್ಷೇತ್ರಗಳಲ್ಲಿ ಒಂದೆನಿಸಿದೆ.     
SCROLL FOR NEXT