ಸೂರ್ಯಪಥ ಬದಲಾವಣೆ, ಸಂಕ್ರಾಂತಿ ಆಚರಣೆ(ಸಾಂಕೇತಿಕ ಚಿತ್ರ)
ಸೂರ್ಯ ಇರುವ ರಾಶಿಗೆ ಸೌರಮಾನ ಎಂಬ ಹೆಸರಿದ್ದು ಸೂರ್ಯೋದಯ ಆಗುವ ರಾಶಿಯ ಹೆಸರಿನಲ್ಲೇ ಮಾಸಗಳನ್ನೂ ಕರೆಯಲಾಗಿದೆ. ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಮಣ ಎಂದು ಹೆಸರು. ಅಂದರೆ ಒಂದು ವರ್ಷದಲ್ಲಿ ಹನ್ನೆರಡು ಸಂಕ್ರಮಣಗಳಿದ್ದು, ಮೇಷ ಸಂಕ್ರಮಣದಿಂದ ಇವುಗಳು ಆರಂಭವಾಗುತ್ತವೆ. ಈ ಪೈಕಿ ಕರ್ಕಾಟಕ ಸಂಕ್ರಾಂತಿ (ದಕ್ಷಿಣಾಯನಾರಂಭ) ಮತ್ತು ಮಕರಸಂಕ್ರಾಂತಿ (ಉತ್ತರಾಯಣಾರಂಭ)ಗಳು ಪ್ರಮುಖವಾದದ್ದು. ಇವುಗಳಲ್ಲಿ ಮಕರ ಸಂಕ್ರಾಂತಿಯೇ ಹೆಚ್ಚು ಪ್ರಸಿದ್ಧ. ಹಾಗೆಯೇ ಸೌರಮಾನರೀತಿಯಾಗಿ ವರ್ಷಾರಂಭಮಾಡುವವರಿಗೆ ಮೇಷಸಂಕ್ರಾಂತಿಯು ಹೆಚ್ಚು ಬಳಕೆಯಾಗಿರುತ್ತದೆ.
ಹನ್ನೆರಡು ಸಂಕ್ರಮಣಗಳೂ ಪುಣ್ಯಕಾಲಗಳೆನಿಸಿರುತ್ತವೆ. ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಮಾಡುವ ಈ ಪವಿತ್ರಕಾಲಗಳು ಸಂಕ್ರಾಂತಿಗಳೆನಿಸಿದ್ದು ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿದ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳಾಗಿವೆ. 12 ಸಂಕ್ರಾಂತಿಗಳನ್ನು ಧಾನ್ಯಸಂಕ್ರಾಂತಿ, ಲವಣಸಂಕ್ರಾಂತಿ, ಭೋಗಸಂಕ್ರಾಂತಿ, ರೂಪಸಂಕ್ರಾಂತಿ, ತೇಜಸ್ಸಂಕ್ರಾಂತಿ, ಸೌಭಾಗ್ಯಸಂಕ್ರಾಂತಿ, ತಾಂಬೂಲಸಂಕ್ರಾಂತಿ, ಮನೋರಥಸಂಕ್ರಾಂತಿ, ಅಶೋಕಸಂಕ್ರಾಂತಿ, ಆಯಸ್ಸಂಕ್ರಾಂತಿ, ಧನಸಂಕ್ರಾಂತಿ, ಸರ್ವಸಂಕ್ರಾಂತಿಗಳೆಂದೂ ಕರೆಯುವ ಪದ್ಧತಿ ಇದ್ದು, ಇವುಗಳಲ್ಲೆಲ್ಲ ಸಂಕ್ರಾಂತಿಯ ಅಭಿಮಾನಿದೇವತೆ ಸೂರ್ಯನ ಪೂಜೆಯೇ ಪ್ರಧಾನವಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಆಯನವೆಂದರೆ ಸೂರ್ಯನು ಚಲಿಸುವಮಾರ್ಗ, ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿ ಉಲ್ಲೇಖವಿದ್ದು ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ ಎಂಬ ನಂಬಿಕೆ ಇದೆ.
ಶಾಸ್ತ್ರ ದೃಷ್ಟಿಯಲ್ಲಿ ಮಕರ ಸಂಕ್ರಾಂತಿ:
ಶಿತಸ್ಯಾಂ ಕೃಷ್ಣತೈಲೈಃ ಸ್ನಾನ ಕಾರ್ಯಂ ಚೋದ್ವರ್ತನಂ ಶುಭೈಃ
ತಿಲಾ ದೇಯಾಶ್ಚ ವಿಪ್ರೇಭ್ಯೌ ಸರ್ವದೇವೋತ್ತರಾಯಣೇ
ತಿಲ ತೈಲೇನ ದೀಪಾಶ್ಚ ದೇಯಾಃ ದೇವಗೃಹೇ ಶುಭಾಃಷಿ ಎನ್ನುತ್ತದೆ ನಿರ್ಣಯಸಿಂಧು ಅಂದರೆ ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಕೊಡಬೇಕು. ದೇವಾಲಯಗಳಲ್ಲಿ ಎಳ್ಳೆಣ್ಣೆಯ ದೀಪ ಬೆಳಗಬೇಕು ಎಂಬುದು ಇದರ ಅರ್ಥ. ಇದು ನಿರ್ಣಯಸಿಂಧುವಿನ ಉಲ್ಲೇಖವಾದರೆ ಧರ್ಮ ಸಿಂಧುವಿನಲ್ಲಿ ಉತ್ತರಾಯಣದ ಪುಣ್ಯಕಾಲದಂದು ನಾವು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ಇನ್ನು ಭಾರತೀಯ ಆಚರಣೆಗಳಲ್ಲಿ ಬಹುತೇಕ ಹಬ್ಬದಲ್ಲೂ ಇರುವಂತೆ ಸಂಕ್ರಾಂತಿಯ ದಿನದಂದೂ ಪುಣ್ಯ ಸ್ನಾನ ಮಾಡುವ ಪದ್ಧತಿ ಇದ್ದು, ಈ ದಿನದಂದು ತ್ರಿವೇಣಿ ಸಂಗಮದಲ್ಲಿ ಮಾಡುವ ಪುಣ್ಯ ಸ್ನಾನವನ್ನು ಸೂರ್ಯಸ್ನಾನ ಎನ್ನುತ್ತಾರೆ. ಹರಿದ್ವಾರ, ಅಲಹಾಬಾದ್, ಉಜ್ಜ ಯಿನಿ, ನಾಸಿಕ್ ಸೇರಿದಂತೆ ಪವಿತ್ರ ಸ್ಥಳಗಳಲ್ಲಿ ಮಕರ ಸಂಕ್ರಾಂತಿಯಂದು ಸ್ನಾನ ಮಾಡಿದರೆ ವಿಶೇಷ ಪುಣ್ಯ ಲಭಿಸುತ್ತದೆಂಬ ನಂಬಿಕೆ ಇದೆ.
ಯುಗಾದಿ, ದಸರಾ, ದೀಪಾವಳಿ, ಗಣೇಶ ಹಬ್ಬದಂತೆಯೇ ವಿಶೇಷ ಮಹತ್ವ ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಹಬ್ಬಕ್ಕಿದೆ. ಉತ್ತರ ಕರ್ನಾಟಕದಲ್ಲಿನ ರೈತರು ಹೊಸದಾಗಿ ಬೆಳೆದ ಆಹಾರ-ಪದಾರ್ಥದಿಂದ ರುಚಿ ಶುಚಿಯಾದ ಕುಸರೆಳು (ಸಕ್ಕರೆ ಅಥವಾ ಬೆಲ್ಲದ ಎಳ್ಳನ್ನು ಅದ್ದಿ ತಯಾರಿಸುವ ಭಕ್ಷ್ಯ)ನ್ನು ವಿಶೇಷವಾಗಿ ತಯಾರು ಮಾಡುವುದಲ್ಲದೇ, ಇದರೊಂದಿಗೆ, ಸಜ್ಜೆ ರೊಟ್ಟಿ, ಅವರೆಕಾಯಿ, ಬದನೆಕಾಯಿ, ಗೆಣಸು ಮೊದಲಾದ ತರಕಾರಿಯಿಂದ ಭಕ್ಷ್ಯ ಭೋಜ್ಯ ತಯಾರು ಮಾಡಿ, ಹೊಲದಲ್ಲಿ ಬಂಧು-ಬಾಂಧವರೊಂದಿಗೆ ದೇವರಿಗೆ ಅರ್ಪಿಸಿ ಹಬ್ಬ ಆಚರಿಸುತ್ತಾರೆ.
ಸೂರ್ಯ ಪೂಜೆಗೆ ಅಗ್ರಸ್ಥಾನ – ದಾನ ಧರ್ಮಗಳಿಗೆ ಪುಣ್ಯ ದಿನ:
ಮಕರ ಸಂಕ್ರಮಣ ದಿನದಂದು ಸೂರ್ಯನೇ ಪ್ರಧಾನ ದೇವತೆ. ಈ ಭೂಮಿಗೆ, ಜಗತ್ತಿನ ಜನರಿಗೆಲ್ಲಾ ಬೆಳಕನ್ನು ತೋರುವ ಕ್ರಿಯಾಶೀಲರಾಗಿರುವಂತೆ ಮಾಡುವ ಸೂರ್ಯ ಭಗವಂತ ತ್ರಿಮೂರ್ತಿಗಳ ಪ್ರತಿರೂಪ ಎಂಬ ಮಾತಿದೆ. ಇಂದು ದಾನ ಧರ್ಮಗಳಿಗೆ, ಪಿತೃಗಳಿಗೆ ತರ್ಪಣ ಸಲ್ಲಿಸಲು ಪುಣ್ಯ ದಿನವಾದ್ದರಿಂದ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ-ಕೈಂಕರ್ಯಗಳು ನಡೆಯುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos