ಯುಗಾದಿ ಹಬ್ಬದ ಆಚರಣೆ (ಸಂಗ್ರಹ ಚಿತ್ರ)
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬಂದಿದೆ. ಹಳೆಯ ವರ್ಷ ಕಳೆದು ಬರುವ ಪ್ರತಿ ಹೊಸ ವರ್ಷಕ್ಕೂ( ಸಂವತ್ಸರಕ್ಕೂ) ಒಂದೊಂದು ಹೆಸರಿರುವುದು ಭಾರತೀಯ ಸಂಸ್ಕೃತಿಯಲ್ಲಿನ ಹೊಸ ವರ್ಷಾಚರಣೆಯ ವೈಶಿಷ್ಟ್ಯ. ಒಟ್ಟು 60 ಸಂವತ್ಸರಗಳಿದ್ದು, ಒಂದು ಚಕ್ರ ಪೂರ್ಣಗೊಂಡು ಮತ್ತೊಮ್ಮೆ ಅದೇ ಸಂವತ್ಸರ ಬರುವುದಕ್ಕೆ 60 ವರ್ಷಗಳಾಗುತ್ತದೆ.
ಭಾರತೀಯ ಪರಂಪರೆಯಲ್ಲಿನ ಕಾಲದ ಲೆಕ್ಕಾಚಾರವೇ ಹಾಗೆ ಬೇರೆಲ್ಲಾ ಪರಂಪರೆಗಳಿಗಿಂತ ತೀರಾ ಭಿನ್ನವಾದ, ವಿಶಿಷ್ಟ ರೀತಿಯಲ್ಲಿದೆ. ಸಂವತ್ಸರಗಳನ್ನು ಹೆಸರಿಸುವುದು, ಕಾಲವನ್ನು ವಿಘಟಿಸುವುದೂ ಎಲ್ಲವೂ ದೈವದ ಸುತ್ತಲೇ ಕೇಂದ್ರಿತವಾಗಿರುತ್ತದೆ. ಅಂತೆಯೇ ಕಾಲ ನಿರ್ಣಯವೂ ಸಹ ದೈವದ ಸುತ್ತ ಕೇಂದ್ರಿತವಾಗಿದೆ. ಆದರೆ ಮನುಷ್ಯನ ಕಾಲಕ್ಕೂ, ದೇವತೆಗಳ ಕಾಲಕ್ಕೂ ವ್ಯತ್ಯಾಸವಿದ್ದು, ಬ್ರಹ್ಮನ ಆಯುಷ್ಯದೊಂದಿಗೆ ಹೋಲಿಸಿ ದೇವತೆಗಳಿಗೆ ಅನ್ವಯಿಸುವ ಕಾಲವನ್ನು ಗುರುತಿಸುತ್ತೇವೆ. ಸಾಮಾನ್ಯವಾಗಿ ಮನುಷ್ಯನ ಆಯುಷ್ಯವನ್ನು 100-120 ವತ್ಸರಗಳೆಂದು ಹೇಳಲಾಗಿದೆ. ಅಂತೆಯೇ ಈ ಚತುರ್ಮುಖನ ಕಾಲವೂ ನೂರೆಂದು ಹೇಳಲಾಗಿದೆ. ಆದರೆ ಚತುರ್ಮುಖನ ನೂರು ವರ್ಷಗಳ ಲೆಕ್ಕಾಚಾರವೇ ಬಹು ದೊಡ್ಡದು. ಇಂತಹ ವರ್ಷಗಳು ನಾಲಕ್ಕು ಲಕ್ಷ ಮೂವತ್ತೆರಡು ಸಾವಿರವಾದರೆ ಕಲಿಯುಗ ಮುಗಿಯುತ್ತದೆ! ಅಂತೆಯೇ ದ್ವಾಪರಯುಗಕ್ಕೆ 8,64,000 ವರ್ಷಗಳು. ನಂತರ ತ್ರೇತಾಯುಗದ ಆಯುರ್ಮಾನ 12,96,000 ವರ್ಷಗಳು. ಅನಂತರದ ಕೃತಯುಗಕ್ಕೆ 17,28,000 ವರ್ಷಗಳು. ಈ ನಾಲ್ಕು ಯುಗಗಳ ಒಟ್ಟು ಕಾಲಮಾನ 43,20,000 ವರ್ಷಗಳು. ಇಂತಹ 43,20,000 ವರ್ಷಗಳು ಮತ್ತೆ ಮತ್ತೆ 1000 ಬಂದರೆ ನಮ್ಮ ಬ್ರಹ್ಮನಿಗೆ ಒಂದು ದಿನ. ಇಂತಹ ದಿನಗಳು ಮೂವತ್ತಾದರೆ ತಿಂಗಳು, ಅಂತಹ ತಿಂಗಳುಗಳು ಹನ್ನೆರಡಾದರೆ ವರ್ಷ. ಇಂತಹ ವರ್ಷಗಳು ನೂರಾಗಬೇಕು ನಮ್ಮ ಈಗಿನ ಬ್ರಹ್ಮನ ಆಯುಷ್ಯ ಪೂರ್ಣಗೊಳ್ಳುವುದಕ್ಕೆ.
ಇದು ಜಗತ್ತನ್ನು ನಿಯಂತ್ರಿಸುವ ದೇವತೆಗಳ ಕಾಲದ ಲೆಕ್ಕಾಚಾರವಾದರೆ ಭೂಮಿಯಲ್ಲಿನ ಕಾಲದ ಲೆಕ್ಕಾಚಾರ ನಮಗೆಲ್ಲಾ ತಿಳಿದೇ ಇದೆ. 60 ಸಂವತ್ಸರಗಳು, ಒಂದು ಗಂಟೆಗೆ 60 ನಿಮಿಷ, 60 ಕ್ಷಣಗಳಿಗೆ 1 ನಿಮಿಷ. ಮನುಷ್ಯನ ಕಾಲದ ಲೆಕ್ಕಾಚಾರಕ್ಕೂ ಹಾಗೂ ಮನುಷ್ಯನ ಆಯುಷ್ಯಕ್ಕೂ ಸಂಬಂಧವಿದೆ ಎಂಬ ನಂಬಿಕೆ ಇದೆ. ಏಕೆಂದರೆ ಮನುಷ್ಯನ ಪೂರ್ಣ ಪ್ರಮಾಣದ ಆಯುಷ್ಯ ಗರಿಷ್ಠ 120 ವರ್ಷಗಳೆಂದು ಹೇಳಲಾಗಿದೆ. ಅದರಲ್ಲಿ ಅರ್ಧ ಭಾಗ 60 ಆಗಿದೆ. ಒಬ್ಬ ವ್ಯಕ್ತಿ ಹುಟ್ಟಿದ ಸಂವತ್ಸರ ಮತ್ತೆ ಬರಬೇಕೆಂದರೆ 60 ವರ್ಷಗಳು ಬೇಕಾಗುತ್ತದೆ. ಅಂದರೆ ಆ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಸಂಪೂರ್ಣ ಸಂವತ್ಸರಗಳನ್ನು ನೋಡಿರುತ್ತಾನೆ, ಇದೇ ಎರಡನೇ ಬಾರಿ ಪೂರ್ಣಗೊಂಡರೆ ಅಂದರೆ 120 ವರ್ಷಗಳಿಗೆ ಮನುಷ್ಯನಿಗೆ ಎರಡನೇ ಬಾರಿಗೆ ಸಂವತ್ಸರಗಳ ಆವರ್ತ ಪೂರ್ಣಗೊಳ್ಳುತ್ತದೆ. ಆದ್ದರಿಂದ ಒಟ್ಟು 60 ಸಂವತ್ಸರಗಳಿವೆ ಎನ್ನಲಾಗುತ್ತದೆ.
ಹೇಮಲಂಬ/ ಹೇವಿಳಂಬಿ ನಾಮ ಸಂವತ್ಸರದ ಹೆಸರಿನ ಅರ್ಥ: ಹೇಮ ಎಂದರೆ ಸಂಸ್ಕೃತದಲ್ಲಿ ಸುವರ್ಣ ಅಥವಾ ಚಿನ್ನ ಎಂಬ ಅರ್ಥವಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಈ ಸಂವತ್ಸರ ಸಂವೃದ್ಧಿ, ಸಂತೋಷಗಳನ್ನುಂಟು ಮಾಡುತ್ತದೆ ಎಂಬುದು ಹೇಮಲಂಬ ನಾಮ ಸಂವತ್ಸರದ ಹೆಸರಿನ ಅರ್ಥ. ಹೇಮಲಂಬಿ ನಾಮ ಸಂವತ್ಸರದಲ್ಲಿ ಆಧ್ಯಾತ್ಮಿಕ ಪ್ರಗತಿಯೊಂದಿಗೆ ಪ್ರಾಪಂಚಿಕ ಸಂವೃದ್ಧಿಯೂ ಉಂಟಾಗಲಿ. ಯುಗಾದಿ ಹಬ್ಬದ ಶುಭಾಶಯಗಳು
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos