ವೈಕುಂಠ ಏಕಾದಶಿ ವಿಷ್ಣುವಿಗೆ ಸಮರ್ಪಿತವಾದ ಪವಿತ್ರ ದಿನವಾಗಿದ್ದು, ಈ ದಿನದ ಉಪವಾಸವಿದ್ದು ಪೂಜೆ ಮಾಡಿದರೆ ಜನ್ಮ ಜನ್ಮಾಂತರದ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆಯಿದೆ. ವೈಕುಂಠ ಏಕಾದಶಿ ವ್ರತ ಆಚರಿಸುವುದರಿಂದ, ಜನನ-ಮರಣ ಚಕ್ರದಿಂದ ಮುಕ್ತಿ (ಮೋಕ್ಷ) ನೀಡಿ, ವೈಕುಂಠದಲ್ಲಿ ಸ್ಥಾನ ಲಭಿಸುತ್ತದೆ. ಇದನ್ನು 'ಮೋಕ್ಷ ಏಕಾದಶಿ' ಎಂದೂ ಪ್ರಸಿದ್ಧವಾಗಿದೆ, ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ವಿಷ್ಣುವಿನ ಅನುಗ್ರಹ ಪಡೆಯಲು ಸಹಕಾರಿ ಎಂದು ನಂಬಲಾಗಿದೆ.
ದೇಶದಾದ್ಯಂತ ಹಿಂದೂಗಳು ಈ ಪವಿತ್ರ ದಿನವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ. ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿಯೊಂದು ವಿಷ್ಣು ದೇವನ ದೇವಾಲಯದಲ್ಲೂ ವೈಕುಂಠ ಏಕಾದಶಿ ದಿನದಂದು ವಿಶೇಷ ಪ್ರಾರ್ಥನೆ, ಪೂಜೆ - ಪುನಸ್ಕಾರಗಳು, ಯಜ್ಞಗಳು, ಪ್ರವಚನೆ ಹಾಗೂ ವಿವಿಧ ರೀತಿಯಾದ ಧಾರ್ಮಿಕ ಆವಚರಣೆಗಳನ್ನು ನಡೆಸಲಾಗುತ್ತದೆ.
ಈ ವರ್ಷ ಡಿಸೆಂಬರ್ 30 ರಂದು ವೈಕುಂಠ ಏಕಾದಶಿ ಆಚರಣೆಯಿದೆ. ಈ ದಿನ ವೈಕುಂಠದ ದ್ವಾರವನ್ನು ನಿರ್ಮಿಸಿ, ವೃತವನ್ನು ಆಚರಿಸುವ ಪದ್ಧತಿ ಇದೆ. ವೈಕುಂಠ ಏಕಾದಶಿ ಬೆಳಿಗ್ಗೆ ಮಂಗಳವಾರ ಬೆಳಗ್ಗೆ 7:50 ರಿಂದ ಪ್ರಾರಂಭವಾಗಿ ಡಿಸೆಂಬರ್ 31 ರ ಬೆಳಿಗ್ಗೆ 5ರ ವರೆಗೂ ಇರುತ್ತದೆ. ಈ ಅವಧಿಯಲ್ಲಿ ವ್ರತವನ್ನು ಆಚರಿಸುವುದು ಉತ್ತಮ.
ಈ ದಿನದ ಉಪವಾಸದಿಂದ ಜನನ-ಮರಣದ ಬಂಧನದಿಂದ ಮುಕ್ತಿ ಸಿಗುತ್ತದೆ ಮತ್ತು ವಿಷ್ಣುವಿನ ನಿತ್ಯ ನಿವಾಸವಾದ ವೈಕುಂಠ ಧಾಮವನ್ನು ಸೇರಬಹುದು. ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಇದು ಸೂಕ್ತ ದಿನವಾಗಿದೆ. ಈ ದಿನ ವಿಷ್ಣುವಿನ ವೈಕುಂಠ ಧಾಮದ ಬಾಗಿಲುಗಳು ಭಕ್ತರಿಗೆ ತೆರೆದಿರುತ್ತವೆ ಎಂದು ನಂಬಿಕೆ, ಆದ್ದರಿಂದಲೇ ಇದನ್ನು 'ವೈಕುಂಠ ಏಕಾದಶಿ' ಎನ್ನುತ್ತಾರೆ.
ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯಲ್ಲಿ ಈ ಮಾಸದ (ಮಾರ್ಗಶಿರ) ಮಹತ್ವವನ್ನು ಹೇಳಿದ್ದಾನೆ. ಪದ್ಮ ಪುರಾಣದ ಪ್ರಕಾರ, ಈ ದಿನ ಮುರಾ ಎಂಬ ರಾಕ್ಷಸನ ಸಂಹಾರದಿಂದ 'ಏಕಾದಶಿ ದೇವಿ' ಉದ್ಭವಿಸಿದಳು. ಅವಳನ್ನು ಪೂಜಿಸಿದವರಿಗೆ ಮೋಕ್ಷ ಕರುಣಿಸಬೇಕೆಂದು ವಿಷ್ಣುವಿಗೆ ವರ ಬೇಡಿದಳು. ವಿಷ್ಣುವಿನ ನಾಮಸ್ಮರಣೆ ಮತ್ತು ಪ್ರಾರ್ಥನೆಗಳಿಂದ ದೈವಿಕ ಸಂಪರ್ಕ ಹೆಚ್ಚಾಗುತ್ತದೆ ಎಂಬ ಪ್ರತೀತಿಯಿದೆ.
ಪುರಾಣ ಕಥೆಗಳ ಪ್ರಕಾರ ‘ಒಮ್ಮೆ ವಿಷ್ಣುವು ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡುತ್ತಾನೆ. ಬಳಿಕ ನಾನು ಯಾವ ದಿನದಂದು ವೈಕುಂಠದ ಬಾಗಿಲನ್ನು ತೆರೆಯುತ್ತೇನೆಯೋ ಆ ದಿನ ಭೂಮಂಡಲದಲ್ಲಿ ಉಪವಾಸ ಮಾಡುವ ಮನುಷ್ಯ ವೈಕುಂಠಕ್ಕೆ ಬರಲು ಅರ್ಹನಾಗುತ್ತಾನೆ’ ಎಂಬ ಸಂದೇಶ ನೀಡಿದರು ಎಂಬ ನಂಬಿಕೆ ಇದೆ.
ಇದು ಮೋಕ್ಷದ ಸಂಕೇತ, ಇದು ಅಂತರಂಗ ಶುದ್ಧಿಯ ಕರೆ. ಪುರಾಣಗಳ ಪ್ರಕಾರ ಈ ದಿನ ಭಗವಂತನು ಭಕ್ತರಿಗೆ ಹೀಗೆ ಅನುಗ್ರಹಿಸಿದನೆಂದು ಹೇಳಲಾಗುತ್ತದೆ. “ನನ್ನನ್ನು ಶ್ರದ್ಧೆಯಿಂದ ಸ್ಮರಿಸುವವರಿಗೆ ನಾನು ಸ್ವತಃ ವೈಕುಂಠದ ದಾರಿ ತೆರೆದು ಕೊಡುತ್ತೇನೆ ಎಂಬುದು ದೈವವಾಣಿ. ಅದರಂತೆ ವೈಕುಂಠ ನಮ್ಮ ಹೃದಯದಲ್ಲಿದೆ. ಅಲ್ಲಿ ಇರುವ ದ್ವಾರವನ್ನು ತೆರೆಸುವುದು ಹೇಗೆ? ಅಹಂಕಾರವನ್ನು ಬಿಟ್ಟು, ಲೋಭವನ್ನು ಕಡಿಮೆ ಮಾಡಿ, ಕ್ರೋಧವನ್ನು ಶಮನಗೊಳಿಸಿ, ಭಕ್ತಿಯಿಂದ ನಾಮಸ್ಮರಣೆ ಮಾಡಿದಾಗ.. ಆ ಕ್ಷಣದಲ್ಲೇ ವೈಕುಂಠ ದ್ವಾರ ತೆರೆದಂತೇ.
ಆಚರಣೆ ಹೇಗೆ
ಈ ದಿನದಂದು ವಿಷ್ಣುವನ್ನು ಸ್ಮರಿಸುತ್ತಾ ಉಪವಾಸ ಮಾಡುವುದು ಪ್ರಮುಖ ಆಚರಣೆ. ಶ್ರೀಮಹಾ ವಿಷ್ಣುವಿನ ಆರಾಧನೆ, ಮಂತ್ರ ಪಠಣ, ದಾನ-ಧರ್ಮದಂತಹ ಪುಣ್ಯ ಕಾರ್ಯಗಳಲ್ಲಿ ತೊಡಗುವುದು. ಭಕ್ತಿಯಿಂದ ವಿಷ್ಣುವಿನ ನಾಮಗಳನ್ನು ಜಪಿಸುವುದು.