ಬೆಳಗಾವಿ: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಮೊದಲ ಬಜೆಟ್ ನಲ್ಲಿ ಬೆಳಗಾವಿ ನಿರ್ಲಕ್ಷಿಸಲ್ಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ಆದಾಗ್ಯೂ, ಇಲ್ಲಿನ ಭಾರತೀಯ ವೈದ್ಯಕೀಯ ಸಂಸ್ಥೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿಶೇಷ ಅನುದಾನ ಒದಗಿಸಿದ್ದಾರೆ.
ಹೃದಯ , ಮೂತ್ರರೋಗ ಸಮಸ್ಯೆ. ಪ್ಲಾಸ್ಟಿಕ್ ಸರ್ಜರಿ ಮತ್ತಿತರ ಚಿಕಿತ್ಸೆಗೆ ಬೆಳಗಾವಿಯಲ್ಲಿ ಸೂಪರ್ ಸ್ಪೆಶಾಲಿಟಿ ಚಿಕಿತ್ಸೆ ಸೌಲಭ್ಯ ದೊರೆಯುತ್ತಿದೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಅಂದಾಜು 150 ರೂ ಹಾಗೂ ಟ್ರೂಮಾ ಕೇಂದ್ರಕ್ಕೆ 30 ಕೋಟಿ ರೂಪಾಯಿ ಅಗತ್ಯವಿದೆ. 2014ರಲ್ಲಿ ಈ ಯೋಜನೆ ರೂಪಿಸಲಾಗಿತ್ತು. ಆದರೆ. ಈ ಬಾರಿಯ ಬಜೆಟ್ ನಲ್ಲಿ ಇದನ್ನು ಮೇಲ್ದರ್ಜೇಗೇರಿಸಲು ನಿರ್ಧರಿಸಲಾಗಿದೆ.
ಚಿಕ್ಕೋಡಿ ತಾಲೂಕಿನ ಹಿರೆಕೊಡಿ, ನಾಗರಾಳ, ನೇಜ್ ಮತ್ತಿತರ ಗ್ರಾಮಗಳ 10,225 ಹೆಕ್ಟೇರ್ ಭೂ ಪ್ರದೇಶಕ್ಕೆ ಕೃಷ್ಣಾ ನದಿಯಿಂದ ನೀರಾವರಿ ಸೌಲಭ್ಯ ಒದಗಿಸಲು 100 ಕೋಟಿ ರೂ ಮೀಸಲು ಇರಿಸಲಾಗಿದೆ. ಈ ಎರಡನ್ನೂ ಹೊರತುಪಡಿಸದರೆ ಈ ಬಜೆಟ್ ನಲ್ಲಿ ಬೇರೆ ಏನೂ ನೀಡಿಲ್ಲ.
ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರೈತರ 34 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಇದಲ್ಲದೇ ಹೆಚ್ಚುವರಿಯಾಗಿ 6.500 ಕೋಟಿ ಮೊತ್ತದ ಸೌಲಭ್ಯಗಳನ್ನು ರೈತರಿಗೆ ಹೊಸ ಸರ್ಕಾರ ನೀಡಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ, ಬಜೆಟ್ ನಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷಿಸಲಾಗಿದೆ. ರಾಮನಗರ ಮತ್ತು ಹಾಸನ ಜಿಲ್ಲೆಗಳನ್ನು ಮಾತ್ರ ಪರಿಗಣಿಸಲಾಗಿದೆ . ಬೆಳಗಾವಿಯನ್ನು ಬಜೆಟ್ ನಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಶಾಸಕ ಅಭಯ್ ಪಾಟೀಲ್ ಆರೋಪಿಸಿದ್ದಾರೆ.