ಬೆಂಗಳೂರು: ಒಂದೆಡೆ ರಾಜ್ಯ ಬಜೆಟ್ ಮಂಡನೆಗೆ ಸಿಎಂ ಕುಮಾರಸ್ವಾಮಿ ಸಕಲ ಸಿದ್ಧತೆ ಪೂರ್ಣಗೊಳಿಸಿಕೊಂಡಿದ್ದರೆ, ಅತ್ತ ಬಜೆಟ್ ಮಂಡನೆಗೆ ಅಡ್ಡಿ ಪಡಿಸಲು ಬಿಜೆಪಿ ಸಕಲ ತಂತ್ರ ರೂಪಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಬಜೆಟ್ ಅಧಿವೇಶನಕ್ಕೂ ಮುನ್ನ ಆಪರೇಷನ್ ಕಮಲದ ಮಾತುಗಳು ಕೇಳಿಬರುತ್ತಿದ್ದು, ಇಂದಿನ ಬಜೆಟ್ ಅಧಿವೇಶನದಲ್ಲೇ ಕಾಂಗ್ರೆಸ್ ಶಾಸಕರಿಂದ ರಾಜಿನಾಮೆ ಕೊಡಿಸಲು ಬಿಜೆಪಿ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಬೇಕಾದ ಸಕಲ ತಂತ್ರಗಾರಿಕೆ ಪೂರ್ಣಗೊಂಡಿದ್ದು, ಬಜೆಟ್ ಸುಸೂತ್ರವಾಗಿ ನಡೆದರೆ ಬಜೆಟ್ ಪ್ರತಿಗಳನ್ನು ಹರಿದುಹಾಕುವುದು; ಪ್ರತಿ ಸಿಗದೇ ಹೋದಲ್ಲಿ ಬಜೆಟ್ ಪ್ರತಿ ಬೇಕೆಂದು ಪ್ರತಿಭಟನೆ ಮಾಡುವುದು.. ಬಜೆಟ್ ಬಗೆಗಿನ ಚರ್ಚೆ ವೇಳೆ ಟೀಕಿಸುವುದು; ಅನುಮೋದನೆ ಸಮಯದಲ್ಲಿ ಕಾಂಗ್ರೆಸ್ನ ಕೆಲ ಶಾಸಕರಿಂದ ಅಡ್ಡ ಮತದಾನ ಮಾಡಿಸುವುದು; ಹೀಗೆ ಹೇಗಾದರೂ ಮಾಡಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಬೇಕೆಂದು ಬಿಎಸ್ವೈ ಪಡೆ ತಂತ್ರ ಹೆಣೆದಿದೆ ಎನ್ನಲಾಗಿದೆ.