ಬೆಂಗಳೂರು: ಆಪರೇಷನ್ ಕಮಲ ಆರೋಪದಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಬಜೆಟ್ 2019 ಪ್ರತಿಪಕ್ಷ ಬಿಜೆಪಿ ಸದಸ್ಯರ ಗದ್ದಲ ಕೂಗಾಟಗಳ ನಡುವೆಯೇ ಆರಂಭವಾಗಿದ್ದು, ಸಿಎಂ ಕುಮಾರಸ್ವಾಮಿ ಬಜೆಟ್ ಪ್ರತಿಯನ್ನು ಓದಲು ಆರಂಭಿಸಿದ್ದಾರೆ.
ಇನ್ನು ಬಜೆಟ್ ಮಂಡನೆಗೂ ಮುನ್ನ ಬಜೆಟ್ ಪ್ರತಿಯನ್ನು ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ಬಜೆಟ್ ಮಂಡನೆ ಆರಂಭಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಇದಾವುದಕ್ಕೂ ಕಿವಿಗೊಡದ ಸಿಎಂ ಕುಮಾರ ಸ್ವಾಮಿ ಬಜೆಟ್ ಪ್ರತಿ ಓದಲು ಆರಂಭಿಸಿದರು. ಈ ನಡುವೆ ಬಿಜೆಪಿ ಸದಸ್ಯಸರು ಮೈತ್ರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಸೇರಿದಂತೆ ಸದನದಲ್ಲಿದ್ದ ಎಲ್ಲ ಸದಸ್ಯರೂ ಹೆಡ್ ಫೋನ್ ಗಳನ್ನು ಧರಿಸುವ ಮೂಲಕ ಕುಮಾರಸ್ವಾಮಿ ಅವರ ಬಜೆಟ್ ಮಂಡನೆಯನ್ನು ಆಲಿಸಿದರು.
'ಹಲವಾರು ಯೋಜನೆಗಳನ್ನು ಮೈತ್ರಿ ಪಕ್ಷ ನೀಡಿದ ಹೆಗ್ಗಳಿಕೆ ಇದೆ. ನಮ್ಮ ಸರ್ಕಾರ ಬಂದು 256 ದಿನಗಳಾಗಿವೆ. ಸರ್ಕಾರದ ಸಾಧನೆ ಅಳೆಯಲು ಇದು ಸೂಕ್ತ ಸಮಯ. ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿ ನಮ್ಮ ಆದ್ಯತೆ ಎಂದು ಹೇಳಿದರು. ಈ ನಡುವೆ ಮತ್ತೆ ಬಿಜೆಪಿ ಸದಸ್ಯರು ಕುಮಾರಸ್ವಾಮಿ ಬಜೆಟ್ ಮಂಡನೆಗೆ ವಿರೋಧ ಪಕ್ಷದಿಂದ ತೀವ್ರ ಅಡ್ಡಿ ಪಡಿಸಿದರು. ಅಲ್ಲದೆ ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿರೋಧಕ್ಕೆ ಇಲ್ಲಿ ಬೆಲೆ ಇಲ್ಲ. ಹೀಗಾಗಿ ಪ್ರತಿಭಟನಾರ್ಥವಾಗಿ ತಾವು ಸಭಾ ತ್ಯಾಗ ಮಾಡುತ್ತಿರುವುದಾಗಿ ಹೇಳಿ ಸದನದಿಂದ ಹೊರ ನಡೆದರು.