ಕರ್ನಾಟಕ ಬಜೆಟ್

ಹಾಲಿನ ಪ್ರೋತ್ಸಾಹ ಧನ 1 ರೂಪಾಯಿ ಹೆಚ್ಚಳ; ಪ್ರವಾಸೋದ್ಯಮ ಅಭಿವೃದ್ಧಿಗೆ 41 ಕೋಟಿ ರೂ.

Nagaraja AB

ಬೆಂಗಳೂರು: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರತಿ ಲೀಟರ್‌ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 6 ರೂ. ಗೆ ಹೆಚ್ಚಿಸಲಾಗಿದೆ.

ಪ್ರಸ್ತುತ ಪ್ರತಿ ಲೀಟರ್‌ ಹಾಲಿಗೆ ಪ್ರೋತ್ಸಾಹ ಧನ 5 ರೂ.ನೀಡಲಾಗುತ್ತಿದೆ. ಈಗ ಅದಕ್ಕೆ ಒಂದು ರೂಪಾಯಿ ಹೆಚ್ಚಿಸಿ 6 ರೂ.ಗೆ ಏರಿಸಲಾಗಿದೆ.

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಲು 2019-20ನೇ ಸಾಲಿನಲ್ಲಿ 1459 ಕೋಟಿ ರೂ.ವೆಚ್ಚ ಮಾಡಲಾಗುವುದು. ಕ್ಷೀರಭಾಗ್ಯ ಯೋಜನೆಗೆ ಒಟ್ಟು 638 ಕೋಟಿ ರೂ.ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ ಭಾಷಣದಲ್ಲಿ ತಿಳಿಸಿದರು.

ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ನೀಡಲು 405 ಕೋಟಿ ರೂ. ಸೇರಿ ಒಟ್ಟಾರೆ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2,502 ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ಅವರು ತಿಳಿಸಿದರು.

ಪಶುಪಾಲನಾ ಇಲಾಖೆಯ ತಜ್ಞ ಪಶುವೈದ್ಯರ ಸೇವೆಯನ್ನು ಬಳಸಿಕೊಂಡು ಪಶುಪಾಲಕರ ಮನೆಯ ಬಾಗಿಲಲ್ಲಿ ರೋಗಗ್ರಸ್ಥ ಜಾನುವಾರುಗಳಿಗೆ ವಿಶೇಷ ತುರ್ತು ಚಿಕಿತ್ಸೆ ನೀಡಲು 2 ಕೋಟಿ ರೂ.ವೆಚ್ಚದಲ್ಲಿ 15 ಜಿಲ್ಲೆಗಳಲ್ಲಿ ಸುಸಜ್ಜಿತ ಪಶುಚಿಕಿತ್ಸಾ ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಬಡ ಕುಟುಂಬಗಳ ಆರ್ಥಿಕ ಸಬಲೀಕರಣ ಮತ್ತು ಸಾರ್ವಜನಿಕ ಪೌಷ್ಟಿಕ ಆಹಾರ ಪೂರೈಸುವ ದೃಷ್ಟಿಯಿಂದ 5 ಕೋಟಿ ರೂ. ವೆಚ್ಚದಲ್ಲಿ 10 ಸಾವಿರ ಬಡ ನಿರುದ್ಯೋಗಿ ಯುವಕ-ಯುವತಿಯರಿಗೆ ನಾಟಿ ಕೋಳಿ ಸಾಕಾಣಿಕೆ ಮಾಡಲು ಪ್ರೋತ್ಸಾಹ ನೀಡಲಾಗುವುದು ಎಂದು ಪ್ರಕಟಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ 41 ಕೋಟಿ ರೂ
SCROLL FOR NEXT