ನವದೆಹಲಿ: ಲೋಕಸಭೆ ಚುನಾವಣೆ ನಂತರ 5 ಲಕ್ಷ ರು.ಗಿಂತ ಹೆಚ್ಚು ಆದಾಯ ಹೊಂದಿರುವವರಿಗೂ ತೆರಿಗೆಯಲ್ಲಿ ವಿನಾಯ್ತಿ ನೀಡುವ ಚಿಂತನೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಎನ್ ಡಿಎ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋಯಲ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮುಂದಿನ ಸರ್ಕಾರ ಪ್ರಮುಖ ಬಜೆಟ್ ನಲ್ಲಿ 5 ಲಕ್ಷ ರು.ಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ನೀಡುವ ಬಗ್ಗೆ ಪರಿಶೀಲಿಸಲಿದ್ದಾರೆ ಎಂದರು.
ಹಾಲಿ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಮಧ್ಯಮವರ್ಗದ ಜನರಿಗೆ ದೊಡ್ಡ ತೆರಿಗೆ ರಿಲೀಫ್ ನೀಡಿದ್ದು, 5 ರೂ. ಲಕ್ಷವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದರು.
ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬಜೆಟ್ ಮಂಡನೆಯಲ್ಲಿ ಮಾಹಿತಿ ನೀಡಿದ ಗೋಯಲ್ ಅವರು, 5 ಲಕ್ಷ ರೂ ವರೆಗೂ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಇರುವುದಿಲ್ಲ. ಅಂತೆಯೇ ಶೇ.5 ರಷ್ಟು ಇದ್ದ ತೆರಿಗೆಯನ್ನೂ ರದ್ದು ಗೊಳಿಸಿರುವುದಾಗಿ ಘೋಷಿಸಿದರು. ಅಂತೆಯೇ ವಾರ್ಷಿಕ 6.5 ಲಕ್ಷ ರೂ ವಾರ್ಷಿಕ ಆದಾಯ ಹೊಂದಿರುವವರು ಸಣ್ಣ ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡಿದರೆ ಇವರಿಗೂ ಸಹ ತೆರಿಗೆ ವಿನಾಯಿತಿ ದೊರೆಯಲಿದೆ.
ಇದಲ್ಲದೆ ಹಾಲಿ ಬಜೆಟ್ ನಲ್ಲಿ ಯಾವುದೇ ರೀತಿಯ ಹೊಸ ತೆರಿಗೆ ಘೋಷಣೆ ಮಾಡಿಲ್ಲ. ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 2.4 ಲಕ್ಷ ರೂ ವರೆಗಿನ ಮನೆ ಬಾಡಿಗೆಗೆ ಮೂಲದಲ್ಲಿ ತೆರಿಗೆ ಕಡಿತ ಇಲ್ಲ. ಸ್ಟಾಂಡರ್ಡ್ ಡಿಡಕ್ಷನ್ ರೂ. 40 ಸಾವಿರದಿಂದ ರೂ.50 ಸಾವಿರಕ್ಕೆ ಹೆಚ್ಚಳ. ಪಿ.ಎಫ್ ಸೇರಿದಂತೆ ಹಲವು ಉಳಿತಾಯಗಳಲ್ಲಿ ಉಳಿಸುವುದು ಸೇರಿದಂತೆ ಒಟ್ಟು ರೂ. 6.5 ಲಕ್ಷ ಆದಾಯದವರೆಗೂ ತೆರಿಗೆ ಬರುವುದಿಲ್ಲ.
ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. 5 ಲಕ್ಷ ರೂಗಳಿಗಿಂತ ಅಧಿಕ 10 ಲಕ್ಷ ರೂಗಳವರೆಗೆ ಶೇ.20%ರಷ್ಟು ತೆರಿಗೆ, 10 ಲಕ್ಷ ರೂಗಳಿಂದ 49 ಲಕ್ಷ ರೂಗಳ ವರೆಗೂ ಶೇ.30ರಷ್ಟು ತೆರಿಗೆ ಮತ್ತು 50 ಲಕ್ಷ ರೂಗಳಿಗೂ ಅಧಿಕ ಆದಾಯ ಹೊಂದಿರುವವರಿಗೆ ಶೇ.30%ರಷ್ಟು ತೆರಿಗೆ ವಿಧಿಸಲಾಗಿದೆ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos