ಕೇಂದ್ರ ಬಜೆಟ್

ಇದು ದೂರದೃಷ್ಟಿಯ ಬಜೆಟ್, ಸಾಮಾನ್ಯ ಜನರನ್ನು ಸಬಲಗೊಳಿಸುತ್ತದೆ: ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಸಂಸತ್ತಿನಲ್ಲಿ 2020, 21ನೇ ಸಾಲಿನ ಬಜೆಟ್ ಮಂಡಿಸಿದ್ದು, ಈ ಬಜೆಟ್ ನ ಪ್ರಸ್ತಾವನೆಗಳು ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ಭರವಸೆಯನ್ನು ಈಡೇರಿಸಿ ಭಾರತದ ಸಾಮಾನ್ಯ ಜನರನ್ನು ಸಬಲಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಮೋದಿ, ಈ ಬಜೆಟ್ ಸರ್ಕಾರದ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ಪರಿಕಲ್ಪನೆಗೆ ಪೂರಕವಾಗಿದೆ ಎಂದರು.

ಈ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಾದ ಕೃಷಿ, ಮೂಲಭೂತ ಸೌಕರ್ಯ, ಜವಳಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ದೂರದೃಷ್ಠಿ ಹೊಂದಿರುವ ದಶಕದ ಮೊದಲ ಬಜೆಟ್‌ ಮಂಡಿಸಿದ್ದಕ್ಕಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಲಾದ ಸುಧಾರಣೆಗಳು ಆರ್ಥಿಕತೆಯ ವೇಗ ಹೆಚ್ಚಿಸುತ್ತವೆ. ಜೊತೆಗೆ, ದೇಶದ ನಾಗರಿಕರನ್ನು ಆರ್ಥಿಕವಾಗಿ ಸಬಲಗೊಳಿಸುತ್ತವೆ. ಈ ವರ್ಷದ ಬಜೆಟ್‌ ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನದ ನಾಲ್ಕು ಪ್ರಮುಖ ಕ್ಷೇತ್ರಗಳನ್ನು ಕೇಂದ್ರೀಕರಿಸಿದ್ದು, ಉದ್ಯೋಗ ಸೃಷ್ಟಿಗೆ ಸಹಾಯವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. 

ಸಾಂಪ್ರದಾಯಿಕ ಮತ್ತು ಹೊಸ ವಿಧಾನಗಳಿಗೆ ಒತ್ತು ನೀಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಸೀತಾರಾಮನ್‌ ಹೆಚ್ಚು ಆದ್ಯತೆ ನೀಡಿದ್ದಾರೆ ಎಂದು ಶ್ಲಾಘಿಸಿದರು. ಜತೆಗೆ, ಮೀನು ಸಂಸ್ಕರಣೆ ಮತ್ತು ಮಾರುಕಟ್ಟೆ ಕ್ಷೇತ್ರಗಳಲ್ಲಿ ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಹೇಳಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಮೋದಿ ತಿಳಿಸಿದ್ದಾರೆ.

SCROLL FOR NEXT