ನವದೆಹಲಿ: ಸಿಲಿಕಾನ್ ಸಿಟಿ ಬೆಂಗಳೂರಿಗರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಬೆಂಗಳೂರು ಉಪನಗರ ರೈಲು ಯೋಜನೆಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದೆ.
ಸಂಸತ್ ನಲ್ಲಿ ಇಂದು 2020ನೇ ಸಾಲಿನ ಬಜೆಟ್ ಭಾಷಣ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ ಅವರು, 'ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಒತ್ತು ನೀಡಲಾಗಿದೆ. ಮೆಟ್ರೊ ಮಾದರಿಯಲ್ಲಿ ರೂ18,600 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಉಪನಗರ ರೈಲು ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಪೈಕಿ ಶೇ 20ರಷ್ಟು ಮೊತ್ತ ಕೇಂದ್ರದ ಸಹಾಯಧನವಾಗಿರಲಿದ್ದು, ಶೇ 50ರಷ್ಟು ಹೊರಗಿನ ನೆರವು ಒದಗಿಸಲು ಭರವಸೆ ನೀಡಲಾಗುತ್ತದೆ ಎಂದು ಹೇಳಿದರು.
ಇದಲ್ಲದೆ ಚೆನ್ನೈ–ಬೆಂಗಳೂರು ಎಕ್ಸ್ಪ್ರೆಸ್ ವೇ ಆರಂಭವಾಗಲಿದ್ದು, ದೆಹಲಿ–ಮುಂಬೈ ಎಕ್ಸ್ಪ್ರೆಸ್ ವೇ 2023ಕ್ಕೆ ಮುಕ್ತಾಯವಾಗಲಿದೆ. ರೈಲು ಹಳಿಗಳ ಬದಿಯಲ್ಲಿ ದೊಡ್ಡ ಮಟ್ಟದ ಸೋಲಾರ್ ಪವರ್ ಘಟಕಗಳ ಸ್ಥಾಪನೆಗೆ ಕ್ರಮ. 150ಕ್ಕೂ ಹೆಚ್ಚು ಖಾಸಗಿ ಸಹಭಾಗಿತ್ವದ ರೈಲುಗಳ ಆರಂಭ. ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ರೂ 23 ಸಾವಿರ ಕೋಟಿ ಘೋಷಣೆ ಮಾಡಿದರು. ಅಂತೆಯೇ ಮುಂಬೈ–ಅಹಮದಾಬಾದ್ ನಡುವೆ ಸ್ಪೀಡ್ ರೈಲು ಯೋಜನೆ ಮುಂದುವರಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.