ಕೇಂದ್ರ ಬಜೆಟ್

ಪೌಷ್ಠಿಕಾಂಶ ಮತ್ತು ವಿದ್ಯುತ್ ಲಭ್ಯತೆ ಹೆಚ್ಚಳದಿಂದ ಜಿಡಿಪಿ ಬೆಳವಣಿಗೆ ದರ ವೃದ್ಧಿ-ಆರ್ಥಿಕ ಸಮೀಕ್ಷೆ

Srinivas Rao BV

ನವದೆಹಲಿ: ಪೌಷ್ಠಿಕಾಂಶ ಮತ್ತು ವಿದ್ಯುತ್ ಲಭ್ಯತೆ ಹೆಚ್ಚಳದಿಂದ ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ) ಬೆಳವಣಿಗೆ ದರ ವೃದ್ಧಿಸಲಿದೆ ಎಂದು ಹೇಳಿರುವ 2019-20 ಆರ್ಥಿಕ ಸಮೀಕ್ಷೆ, ಮೂಲಸೌಕರ್ಯ, ಕೃಷಿ ಅಥವಾ ಉತ್ಪಾದನಾ ವಲಯಗಳಂತೆ ಸೇವಾ ವಲಯದಲ್ಲಿ ಹೊಸ ಸಂಸ್ಥೆ ಆರಂಭಿಸುವುದು ಅಗತ್ಯವಾಗಿದೆ ಎಂದು ಹೇಳಿದೆ.  

ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಸತ್ ನಲ್ಲಿ ಮಂಡಿಸಿದರು. ಹೂಡಿಕೆದಾರರು ಮತ್ತು ನೀತಿ ನಿರೂಪಕರು ನಿರ್ಧಾರ ತೆಗೆದುಕೊಳ್ಳುವಲ್ಲಿ ಜಿಡಿಪಿ ಬೆಳವಣಿಗೆ ಪ್ರಮುಖ ಅಂಶವಾಗುತ್ತದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.  

ಹಿಂದಿಗಿಂತ ಪ್ರಸ್ತುತ ಸನ್ನಿವೇಶದಲ್ಲಿ ಜಿಡಿಪಿ ಬೆಳವಣಿಗೆಯಾಗಲಿದೆಯೇ ಎಂಬುದನ್ನು ಅಧ್ಯಯನ ಮಾಡಲು ಕೈಗೆತ್ತಿಕೊಂಡಿರುವ ಸದ್ಯದ ವಿಧಾನಗಳನ್ನು ಸಮೀಕ್ಷೆ ಎಚ್ಚರಿಕೆಯಿಂದ ಪರಿಶೀಲಿಸಿದೆ. ಭಾರತದ ಅಂಕಿಅಂಶಗಳ ಮೂಲಸೌಕರ್ಯವನ್ನು ಹೆಚ್ಚಿಸಲು ಹೂಡಿಕೆ ಮಾಡುವ ಅಗತ್ಯವನ್ನು ಸಮೀಕ್ಷೆ ಪ್ರತಿಪಾದಿಸಿದೆ. ಭಾರತವು ಹಲವಾರು ಸಾಮಾಜಿಕ ಅಭಿವೃದ್ಧಿ ಸೂಚಕಗಳಲ್ಲಿ ಸುಧಾರಣೆಗಳನ್ನು ಕಂಡಿದೆ ಎಂದು ಸಮೀಕ್ಷೆ ಹೇಳಿದೆ. 

ಎಫ್‍ಡಿಐ ಮಾನದಂಡಗಳನ್ನು ಸಡಿಲಿಸಿರುವುದು, ಕಾರ್ಪೊರೇಟ್ ತೆರಿಗೆಗಳನ್ನು ಕಡಿತಗೊಳಿಸಿರುವುದು, ಹಣದುಬ್ಬರ ಇಳಿಕೆಗೆ ಕ್ರಮ, ಮೂಲಸೌಕರ್ಯ ಸೃಷ್ಟಿ ವೇಗಗೊಳಿಸುವುದು, ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಿರುವುದು,  ತೆರಿಗೆ ಸುಧಾರಣೆ ಸೇರಿದಂತೆ ಹೂಡಿಕೆಗಳನ್ನು ಉತ್ತೇಜಿಸುವ ಹಲವು ಉಪಕ್ರಮಗಳನ್ನು ಭಾರತ ತೆಗೆದುಕೊಂಡಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವುದರಿಂದ, ಹೂಡಿಕೆದಾರರು ಭಾರತದಲ್ಲಿ ಅವಕಾಶಗಳನ್ನು ಎದುರು ನೋಡುತ್ತಾರೆ ಎಂದು ಸಮೀಕ್ಷೆ ಹೇಳಿದೆ.

SCROLL FOR NEXT