ನವದೆಹಲಿ: ಮಂಕಾಗಿರುವ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ 2020 ನೇ ಸಾಲಿನ ಬಜೆಟ್ ಕೇಂದ್ರ ಸರ್ಕಾರಕ್ಕೆ ಸವಾಲಿನ ವಿಷಯವಾಗಿದ್ದರೆ, ದೇಶದ ಜನತೆಗೆ ಸುಧಾರಣೆಯ ನಿರೀಕ್ಷೆಯ ವಿಷಯವಾಗಿದೆ.
ದಶಕದಲ್ಲಿ ಮೊದಲ ಬಾರಿಗೆ ಆರ್ಥಿಕ ಪರಿಸ್ಥಿತಿ ಅತ್ಯಂತ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಮಂಡನೆಯಾಗಲಿರುವ ನಿರ್ಮಲ ಸೀತಾರಾಮನ್ ಅವರ ಆಯ-ವ್ಯಯ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ಗ್ರಾಹಕರ ಬೇಡಿಕೆ ಹಾಗೂ ಹೂಡಿಕೆಯನ್ನು ಉತ್ತೇಜಿಸುವತ್ತ ಕೇಂದ್ರೀಕೃತಗೊಂಡಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಫೆ.1 ರಂದು ಮಂಡನೆಯಾಗುತ್ತಿರುವ ಕೇಂದ್ರ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆ, 2025 ಕ್ಕೆ 5 ಟ್ರಿಲಿಯನ್ ಆರ್ಥಿಕತೆಯಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉದ್ದೇಶಗಳಿಗೆ ಉತ್ತೇಜನಕಾರಿಯಾಗುವಂತಹ ಘೋಷಣೆಗಳಿರಲಿವೆ.
ಕಾರ್ಪೊರೇಟ್ ಟ್ಯಾಕ್ಸ್ ಕಡಿತ, ಹೆಚ್ಚುವರಿಯಾಗಿ ಎಫ್ ಡಿಐ ನ ಒಳಹರಿವಿಗೆ ಅವಕಾಶ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಸೇರಿದಂತೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದ ಬಳಿಕವೂ ಹೂಡಿಕೆ ಚೇತರಿಸಿಕೊಳ್ಳಲು ವಿಫಲವಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಕಾರ್ಪೊರೇಟ್ ತೆರಿಗೆ ಕಡಿತದ ನಂತರ ಈ ವರ್ಷದ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಕಡಿತ, ಬೇಸಿಕ್ ಎಕ್ಸೆಮ್ಷನ್ (basic exemption) ಲಿಮಿಟ್ ಹಾಗೂ ಹೆಚ್ಚಿನ ಆದಾಯ ಹೊಂದಿರುವವರಿಗೆ ವಿಭಿನ್ನ ತೆರಿಗೆ ವ್ಯವಸ್ಥೆ ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
ಕಳೆದ ನಾಲ್ಕೈದು ತಿಂಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡ ಬಳಿಕವೂ ಸಹ ಗ್ರಾಹಕರಲ್ಲಿ ವಿಶ್ವಾಸ ಕಂಡುಬರುತ್ತಿಲ್ಲ. ಆರ್ಥಿಕತೆ ಕುಸಿದಿರುವ ಹಿನ್ನೆಲೆಯಲ್ಲಿ ಹಲವರು ಗೃಹ, ವಾಹನ ಖರೀದಿಗೆ ಮುಂದಾಗುತ್ತಿಲ್ಲ. ಈಹಿನ್ನೆಲೆಯಲ್ಲಿ ಮೋದಿ ಸರ್ಕಾರಕ್ಕೆ ಈಗ ಆರ್ಥಿಕತೆಯಲ್ಲಿ ಫೀಲ್ ಗುಡ್ ಫ್ಯಾಕ್ಟರ್ ಅಗತ್ಯವಿದ್ದು, ವಿಶ್ವಾಸ ಗಳಿಸುವ ಅಗತ್ಯವಿದ್ದು, ಸಾಮಾಜಿಕ ವಲಯವನ್ನು ಓಲೈಸುವ ಒಂದಷ್ಟು ಕ್ರಮಗಳನ್ನು ನಿರೀಕ್ಷಿಸಬಹುದಾಗಿದೆ.