ಕೇಂದ್ರ ಬಜೆಟ್

ಕೇಂದ್ರ ಬಜೆಟ್ ನಲ್ಲಿ ನದಿಗಳ ಅಂತರ ಜೋಡಣೆ ಜಾರಿ ಘೋಷಣೆ: ಕರ್ನಾಟಕದ ಜಲವಿವಾದ ಮೇಲೆ ಪರಿಣಾಮ

Sumana Upadhyaya

ಬೆಂಗಳೂರು: ಕಾವೇರಿ ಮತ್ತು ಮಹಾದಾಯಿ ನದಿಗಳ ನೀರಿಗಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ನಲ್ಲಿ ಘೋಷಿಸಿರುವ ಪ್ರಮುಖ ನದಿಗಳ ಅಂತರ ಜೋಡಣೆ ಯೋಜನೆಯಿಂದ ಪರಿಣಾಮ ಬೀರಲಿದೆ. ನಿನ್ನೆ ಬಜೆಟ್ ಮಂಡಣೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ದೊಡ್ಡ ನದಿಗಳ ಅಂತರ ಜೋಡಣೆಗೆ ಕಳೆದ ವರ್ಷದ ಬಜೆಟ್ ನಲ್ಲಿ 4,300 ಕೋಟಿ ರೂಪಾಯಿಗಳನ್ನು ಮತ್ತು ಈ ಬಾರಿಯ ಬಜೆಟ್ ನಲ್ಲಿ 1,400 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದರು.

ಪೆನ್ನಾರ್-ಕಾವೇರಿ ಮತ್ತು ಕೃಷ್ಣಾ-ಗೋದಾವರಿ ನದಿಗಳ ಅಂತರ ಜೋಡಣೆ ಯೋಜನೆ ಜಾರಿಗೆ ಕರಡು ಯೋಜನಾ ವರದಿಗಳನ್ನು ಸಿದ್ದಪಡಿಸಲಾಗಿದೆ ಎಂದು ನಿನ್ನೆ ಬಜೆಟ್ ಮಂಡಣೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಇದರಿಂದ ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆ. ದೀರ್ಘ ಕಾಲದಿಂದ ಯೋಜನೆ ಮತ್ತು ಚರ್ಚಾ ಹಂತದಲ್ಲಿರುವ ಯೋಜನೆಗಳು ಇವಾಗಿವೆ. ಫಲಾನುಭವಿ ರಾಜ್ಯಗಳ ಮಧ್ಯೆ ಸಹಮತ ಬಂದ ಕೂಡಲೇ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಒಪ್ಪಿಗೆ ನೀಡಲಿದೆ ಎಂದು ಸಚಿವೆ ಹೇಳಿದ್ದಾರೆ.

ಸಚಿವೆ ನಿನ್ನೆ ಈ ಪ್ರಕಟಣೆ ಮಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಕರ್ನಾಟಕದ ಜಲ ವಿವಾದದ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಜಲಸಂಪನ್ಮೂಲ ತಜ್ಞರ ಅಭಿಮತ. ಹಿರಿಯ ಜಲ ಸಂಪನ್ಮೂಲ ತಜ್ಞರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಕರ್ನಾಟಕದ ಮೂರು ಜಲ ವಿವಾದಗಳಾದ ಮಹಾದಾಯಿ, ಕೃಷ್ಣ ಮತ್ತು ಕಾವೇರಿ ನದಿಗಳಿಂದ ಇದರಿಂದ ತೊಂದರೆಯಾಗುವುದಿಲ್ಲ. ಗೋದಾವರಿ ನದಿ ತೀರದ ಹೆಚ್ಚುವರಿ ನೀರನ್ನು ಕೃಷ್ಣ ಮತ್ತು ಇತರ ತೀರ ಪ್ರದೇಶಗಳಲ್ಲಿನ ಬರಪೀಡಿತ ಪ್ರದೇಶಗಳಿಗೆ ತರಲಾಗುವುದು. ನೀರು ಹಂಚಿಕೆಯ ಬಗ್ಗೆ ಸಹಮತವಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ 232 ಟಿಎಂಸಿ ನೀರು ಹಂಚಿಕೆಗೆ ಸಹಾಯ ಮಾಡಲಿದೆ ಎಂದರು.

ಮಹಾದಾಯಿ ಜಲ ವಿವಾದ ನ್ಯಾಯಾಧೀಕರಣ ಮುಂದಿದ್ದು, ನೀರು ಹಂಚಿಕೆಗೆ ಅನುಮತಿ ಸಿಕ್ಕಿದ ಕೂಡಲೇ ಬತ್ತಿದ ಪ್ರದೇಶಗಳಿಗೆ ಸಾಗಿಸಲು ಕಾಲುವೆಗಳ ಜಾಲದ ಅಗತ್ಯವಿದೆ.ಅಂತಹ ಪ್ರಮುಖ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಹಂಚಿಕೆ ತುಂಬಾ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಈ ಬಗ್ಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಕೇಳಿದರೆ ಈ ಯೋಜನೆಗೆ ಕೇಂದ್ರ ಸರ್ಕಾರ ನೀಡುವ ಹಣವು ವಿಸ್ತೃತ ಯೋಜನಾ ವರದಿ(ಡಿಪಿಆರ್), ಯೋಜನಾ ಅಂದಾಜು ಮತ್ತು ಕಡ್ಡಾಯ ಸಮೀಕ್ಷೆಗಳಿಗೆ ಸಹಾಯವಾಗಲಿದೆ ಎಂದರು.

SCROLL FOR NEXT