ವಾಣಿಜ್ಯ

ಆಸ್ತಿ ಬೆಲೆಗಳನ್ನು ಕಡಿತಗೊಳಿಸಬೇಕು: ರಘುರಾಮ್ ರಾಜನ್

Srinivasamurthy VN

ಮುಂಬೈ: ದೇಶಾದ್ಯಂತ ಮಾರಾಟವಾಗದೇ ಉಳಿದಿರುವ ಆಸ್ತಿಗಳ ಬೆಲೆಯನ್ನು ಕಡಿತಗೊಳಿಸುವ ಮೂಲಕ ರಿಯಲ್ ಎಸ್ಟೇಟ್ ಉದ್ಯಮಿಗಳು ಗ್ರಾಹಕರನ್ನು ಸೆಳೆಯಬೇಕು ಎಂದು ಆರ್ ಬಿಐ  ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಆಯೋಜಿಸಿದ್ದ ವಾಣಿಜ್ಯ ಚರ್ಚಾ ಕಾರ್ಯಕ್ರಮದಲ್ಲಿ ಆರ್ ಬಿಐ  ಗವರ್ನರ್ ರಘುರಾಮ್ ರಾಜನ್ ಅವರು ಪಾಲ್ಗೊಂಡಿದ್ದರು. ಈ ವೇಳೆ ರಿಯಲ್ ಎಸ್ಟೇಟ್ ಉದ್ಯಮ ಮತ್ತು ಈ ವಿಭಾಗದಲ್ಲಿ ಬೇಡಿಕೆ ಕುಸಿಯುತ್ತಿರುವ ಕುರಿತು ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ  ಅವರು, "ಮಾರಾಟವಾಗದೇ ಹಾಗೆಯೇ ಉಳಿದಿರುವ ಆಸ್ತಿಗಳ ಮಾಲೀಕರು ಅವುಗಳ ಬೆಲೆಯನ್ನು ಕಡಿತಗೊಳಿಸುವ ಮೂಲಕ ಗ್ರಾಹಕರನ್ನು ಸೆಳೆಯಬೇಕು. ಇದರಿಂದ ಈ ವಾಣಿಜ್ಯ ವಿಭಾಗದ  ಉತ್ತೇಜನಕ್ಕೆ ಸಹಕಾರವಾಗಲಿದೆ. ಒಮ್ಮೆ ಈ ವಿಭಾಗದಲ್ಲಿ ಬೆಲೆಗಳು ಸ್ಥಿರವಾಗಿದೆ ಎಂದು ಗ್ರಾಹಕರು ಭಾವಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಮುಂದಾಗುತ್ತಾರೆ".

"ಬೆಲೆಗಳು ಅಧಿಕವಾಗಿದ್ದರೆ ಗ್ರಾಹಕರು ಈ ವಿಭಾಗದಿಂದ ವಿಮುಖರಾಗುವ ಅಪಾಯವಿರುತ್ತದೆ. ಆಗ ಈ ವಿಭಾಗದ ಮಾರುಕಟ್ಟೆ ಕುಸಿಯುತ್ತದೆ. ಹೀಗಾಗಿ ಮಾಲೀಕರೆ ಈ ಬಗ್ಗೆ ಎಚ್ಚೆತ್ತು ತಾವೇ ಆಸ್ತಿಗಳ ಬೆಲೆ ಕಡಿತಗೊಳಿಸುವ ಮೂಲಕ ಮಾರಾಟಕ್ಕೆ ಮುಂದಾಗಬೇಕು. ಇನ್ನು ಇದಕ್ಕಾಗಿ ಬ್ಯಾಂಕುಗಳು ಕೂಡ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಗೃಹಸಾಲಗಳ ಮೇಲಿನ ನಿಯಂತ್ರಣಗಳನ್ನು ಕಡಿತಗೊಳಿಸುವ ಮೂಲಕ ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಬೇಕು. ಆ ಮೂಲಕ ಗ್ರಾಹಕರನ್ನು ಸೆಳೆಯಬೇಕು ಎಂದು ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.

SCROLL FOR NEXT