ನವದೆಹಲಿ: ದೇಶದ ಲಕ್ಷಾಂತರ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ 55 ಲಕ್ಷ ಪಿಂಚಣಿದಾರರ ವೇತನ ಪರಿಷ್ಕರಣೆ ಶಿಫಾರಸುಗಳೊಂದಿಗೆ ಏಳನೇ ವೇತನ ಆಯೋಗ ತನ್ನ ವರದಿ ಸಿದ್ಧಪಡಿಸಿದ್ದು, ಶೀಘ್ರವೇ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಲಿದೆ. ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಆಯೋಗದ ಅವಧಿಯನ್ನು ಡಿಸೆಂಬರ್ ಅಂತ್ಯದವರೆಗೆ ಹೆಚ್ಚುವರಿಯಾಗಿ ನಾಲ್ಕು ತಿಂಗಳ ಅವಧಿಗೆ ವಿಸ್ತರಿಸಿತ್ತು.
ಇದೀಗ ಆಯೋಗ ಅಂತಿಮ ಶಿಫಾರಸು ಗಳೊಂದಿಗೆ ವರದಿ ಸಿದ್ಧಪಡಿಸಿದ್ದು, ಯಾವುದೇ ಸಂದರ್ಭ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಒಮ್ಮೆ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿ ಜಾರಿಗೆ ತಂದಲ್ಲಿ ದೇಶದ 48 ಲಕ್ಷ ಹಾಲಿ ಕೇಂದ್ರ ಸರ್ಕಾರಿವ ಉದ್ಯೋಗಿಗಳು ಹಾಗೂ 55 ಲಕ್ಷ ಪಿಂಚಣಿದಾರರ ವೇತನದಲ್ಲಿ ಭಾರೀ ಹೆಚ್ಚಳ ನಿರೀಕ್ಷೆ ಇದೆ. ಅಲ್ಲದೆ, ಕೇಂದ್ರದ ವೇತನ ಆಯೋಗದ ಶಿಫಾರಸು ಅನುಸರಿಸಿ ರಾಜ್ಯ ಸರ್ಕಾರಗಳೂ ತಮ್ಮ ನೌಕರರ ವೇತನ ಪರಿಷ್ಕರಿಸಲಿದ್ದು, ರಾಜ್ಯ ಸರ್ಕಾರಿ ನೌಕರರಿಗೂ ಪ್ರಯೋಜನ ಸಿಗಲಿದೆ. ಮೀನಾ ಅಗರ್ವಾಲ್ ಪ್ರಸ್ತುತ ಏಳನೇ ವೇತನ ಆಯೋಗದ ಕಾರ್ಯ ದರ್ಶಿಯಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ವಿವೇಕ್ ರೇ, ಅರ್ಥಶಾಸ್ತ್ರಜ್ಞ ರತೀನ್ ರಾಯ್ ಸದಸ್ಯರಾಗಿದ್ದಾರೆ.ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಉದ್ದೇಶದಿಂದ ವೇತನ ಆಯೋಗ ರಚಿಸುವುದು ವಾಡಿಕೆ.