ನವದೆಹಲಿ: ಜಿಎಸ್ ಟಿ ಜಾರಿಯಿಂದ ತೆರಿಗೆ ದರಗಳಲ್ಲಿ ಬದಲಾವಣೆಗಳಿರುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ.
ಹೊಸ ಜಿಎಸ್ ಟಿ ಕಾಯ್ದೆ ಜಾರಿಯಾವುದರಿಂದ ಈಗಿನ ತೆರಿಗೆ ದರಗಳು ಬದಲಾವಣೆಯಾಗುವುದಿಲ್ಲ. ಜಿಎಸ್ ಟಿ ಜಾರಿಯಿಂದಾಗಿ ಕೇಂದ್ರ ಹಾಗೂ ರಾಜ್ಯ ತೆರಿಗೆಗಳ ವ್ಯತ್ಯಾಸ ಕೊನೆಗೊಳ್ಳಲಿದೆ. ಆದರೆ ಕಂಪನಿಗಳು ಜಿಎಸ್ ಟಿ ಜಾರಿಯಿಂದಾಗುವ ತೆರಿಗೆ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸಬೇಕು ಎಂದು ಜೇಟ್ಲಿ ಹೇಳಿದ್ದಾರೆ.
ವಿವಿಧ ಸರಕುಗಳಿಗೆ ತೆರಿಗೆ ನಿಗದಿ ಮಾಡುವ ಸಲುವಾಗಿ ರಾಜ್ಯಗಳ ಪ್ರತಿನಿಧಿಗಳು ಇರುವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್ ಟಿ ಕೌನ್ಸಿಲ್ ಸಭೆ ಮೇ 18-19 ರಂದು ನಡೆಯಲಿದ್ದು, ವಿವಿಧ ಸರಕುಗಳಿಗೆ ತೆರಿಗೆ ನಿಗದಿಪಡಿಸುವ ಅಂತಿಮ ಹಂತದಲ್ಲಿ ನಾವಿದ್ದೇವೆ, ಯಾವ ಕ್ರಮದಲ್ಲಿ ತೆರಿಗೆ ನಿಗದಿಪಡಿಸಲಾಗುತ್ತಿದೆ ಎಂಬುದನ್ನೂ ಈಗಾಗಲೇ ವಿವರಣೆ ನೀಡಲಾಗಿದೆ. ಆದ್ದರಿಂದ ಯಾವುದೇ ರೀತಿಯ ಅಚ್ಚರಿಗಳಿರುವುದಿಲ್ಲ, ತೆರಿಗೆ ದರಗಳಲ್ಲಿ ಬದಲಾವಣೆಗಳಿರುವುದಿಲ್ಲ ಎಂದು ಸಿಐಐ ನ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.