ವಾಣಿಜ್ಯ

ಮಕ್ಕಳಿಗೆ ಹಣ, ಅಧಿಕಾರ ಅಥವಾ ಸ್ಥಾನಮಾನ ಕೇಳುತ್ತಿಲ್ಲ: ಇನ್ಫಿ ಮಂಡಳಿ ಆರೋಪಕ್ಕೆ ಮೂರ್ತಿ ಪ್ರತಿಕ್ರಿಯೆ

Lingaraj Badiger
ಬೆಂಗಳೂರು: ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸಿಇಒ ಹಾಗೂ ಎಂಡಿ ವಿಶಾಲ್ ಸಿಕ್ಕಾ ಅವರ ರಾಜಿನಾಮೆಗೆ ತಾವೇ ಕಾರಣ ಎಂಬ ಆರೋಪಕ್ಕೆ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಎನ್ ನಾರಾಯಣಮೂರ್ತಿ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ವಿರುದ್ಧದ ಆರೋಪಗಳಿಂದ ನಾನು ತುಂಬಾ ದುಃಖಿತನಾಗಿದ್ದೇನೆ. 2014ರಲ್ಲಿ ನಾನು ಸ್ವಯಂ ಪ್ರೇರಿತನಾಗಿ ಆಡಳಿತ ಮಂಡಳಿಯಿಂದ ಹೊರ ಬಂದಿದ್ದು, ನನ್ನ ಮಕ್ಕಳಿಗಾಗಿ ನಾನು ಯಾವುದೇ ಅಧಿಕಾರ, ಹಣ ಅಥವಾ ಸ್ಥಾನಮಾನ ಕೇಳಿಲ್ಲ. ಕಾರ್ಪೋರೇಟ್ ಆಡಳಿತದ ಗುಣಮಟ್ಟ ಕುಸಿಯದಂತೆ ನೋಡಿಕೊಳ್ಳಬೇಕು ಎಂಬ ವಿಚಾರವನ್ನು ಮಾತ್ರ ನಾನು ಇನ್ಫೋಸಿಸ್ ಮಂಡಳಿಯ ಗಮನಕ್ಕೆ ತಂದಿದ್ದೇನೆ ಎಂದು ಮೂರ್ತಿ ಅವರು ಇ-ಮೇಲ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿರುದ್ಧ ಸಿಕ್ಕಾ ಮಾಡಿರುವ ಆರೋಪ ಆಧಾರ ರಹಿತ ಮತ್ತು ಇದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಮೂರ್ತಿ ಹೇಳಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಆರೋಪಿಗಳಿಗೆ ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಉತ್ತರಿಸುವುದಾಗಿ ಹೇಳಿದ್ದಾರೆ.
ಸಂಸ್ಥೆಯಿಂದ ಕೆಲಸ ತೊರೆಯುತ್ತಿದ್ದ ಉದ್ಯೋಗಿಗಳಿಗೆ ಹೆಚ್ಚಿನ ವೇತನ ನೀಡುತ್ತಿದ್ದ ಬಗ್ಗೆ ಇನ್ಫೋಸಿಸ್‌ ಆಡಳಿತ ಮಂಡಳಿ ಹಾಗೂ ಸ್ಥಾಪಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅಷ್ಟೇ ಅಲ್ಲ ವಿಶಾಲ್ ಸಿಕ್ಕಾ ರಾಜಿನಾಮೆಗೆ ನಾರಾಯಣ ಮೂರ್ತಿ ಅವರ ನಿರಂತರ ಕಿರಿಕಿರಿಯೇ ಕಾರಣ ಎಂದು ಇನ್ಫೋಸಿಸ್ ಆಡಳಿತ ಮಂಡಳಿ ಕೂಡಾ ದೂರಿದೆ.
ಸಿಕ್ಕಾ ಅವರು ಇನ್ಫೋಸಿಸ್ ಆಡಳಿತ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಹಲವಾರು ಮಹತ್ವದ ಬದಲಾವಣೆಗಳನ್ನು ತಂದಿದ್ದರು.  ಇದರ ವಿರುದ್ಧ ಅಸಮಾಧಾನಗೊಂಡಿದ್ದ ನಾರಾಯಣ ಮೂರ್ತಿ ಅವರು ಸಿಕ್ಕಾ ವಿರುದ್ಧ ಪತ್ರ ಚಳವಳಿ ನಡೆಸಿದ್ದರು ಎಂದು ಆರೋಪಿಸಲಾಗಿದೆ.
SCROLL FOR NEXT