2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಲವು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ 2017 ರಲ್ಲಿ ಕೆಲವು ಮಹತ್ವದ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ದೇಶದ ಆರ್ಥಿಕ ಬಲವರ್ಧನೆಗಾಗಿ ಕೈಗೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳ ಬಗ್ಗೆ ವಿಶ್ವಬ್ಯಾಂಕ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ನೋಟು ನಿಷೇಧದ ಒಂದು ವರ್ಷದ ನಂತರವೂ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ 2017 ರಲ್ಲಿ ವಿಶ್ವದ ಹಲವು ರೇಟಿಂಗ್ ಸಂಸ್ಥೆಗಳಿಂದ ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಆರ್ಥಿಕತೆಗೆ ಸಂಬಂಧಿಸಿದಂತೆ ಸರ್ಕಾರದ ಪಾಲಿಗೆ ಮಾತ್ರ 2017 ಮಿಶ್ರ ಪ್ರತಿಕ್ರಿಯೆಯ ವರ್ಷವಾಗಿದ್ದು 2017 ರಲ್ಲಿ ಸರ್ಕಾರ ಕೈಗೊಂಡ ಪ್ರಮುಖ ಆರ್ಥಿಕ ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ.
ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ಸರಕು ಮತ್ತು ಸೇವಾ ತೆರಿಗೆ ಅರ್ಥಾತ್ ಒಂದೇ ದೇಶ ಒಂದೇ ತೆರಿಗೆ ವ್ಯವಸ್ಥೆ ಜಾರಿಯಾಗಿದ್ದು 2017 ರ ಒ ಜು.1 ರಂದು. ಪರೋಕ್ಷ ತೆರಿಗೆಯನ್ನೊಳಗೊಂಡ ತೆರಿಗೆ ವ್ಯವಸ್ಥೆ ಜಾರಿಯಾಗುತ್ತಿದ್ದಂತೆಯೇ ದೇಶಾದ್ಯಂತ ವ್ಯಾಪಾರಿಗಳ ವಲಯದಲ್ಲಿ ಕೆಲವು ದಿನಗಳವರೆಗೆ ಗೊಂದಲದ ವಾತಾವರಣ ಉಂಟಾಗಿತ್ತು.
2017 ರಲ್ಲಿ ತೈಲ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಬೆಳವಣಿಗೆಗಳು ನಡೆದಿದ್ದು, ಜೂನ್ ತಿಂಗಳಿನಿಂದ ಅಮೆರಿಕ, ಆಸ್ಟ್ರೇಲಿಯಾ ಮಾದರಿಯಲ್ಲಿ ಪ್ರತಿದಿನ ತೈಲ ಬೆಲೆ ಪರಿಷ್ಕರಣೆ ಪ್ರಾರಂಭವಾಯಿತು. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರವನ್ನು ಆಧರಿಸಿ ಪ್ರತಿ ದಿನ ತೈಲ ದರ ಪರಿಷ್ಕರಣೆಯಾಗುವ ಪದ್ಧತಿ ಭಾರತದಲ್ಲೂ ಈಗ ಜಾರಿಯಲ್ಲಿದೆ.
ಪಿಎಸ್ ಯು ಬ್ಯಾಂಕ್ ಮರುಬಂಡವಾಳ
ಬ್ಯಾಡ್ ಲೋನ್ ಗಳ ಪ್ರಮಾಣ ಶೇ.9.6 ರಷ್ಟಾಗಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಮರುಬಂಡವಾಳ ತೊಡಗಿಸುವ ಪ್ರಕ್ರಿಯೆಗೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೆಲ್ ಕರೆ ನೀಡಿದ್ದರು. ಅದರಂತೆಯೇ ಸರ್ಕಾರ ಸಹ ಮರು ಬಂಡವಾಳ ಹೂಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಭಾರತ ಸರಕಾರ ಒಂದು ಲಕ್ಷ ಮೂವತ್ತೈದು ಸಾವಿರ ಕೋಟಿ ರೂಪಾಯಿಯನ್ನ ಬ್ಯಾಂಕ್ ರಿ ಕ್ಯಾಪಿಟಲೈಸೇಶನ್ ಬಾಂಡ್ ಬಿಡುಗಡೆ ಮಾಡಿ ಉಳಿದ 58,000 ಕೋಟಿ ರೂಪಾಯಿಯನ್ನು ಕ್ಯಾಪಿಟಲ್ ಮಾರ್ಕೆಟ್ ನಿಂದ ಸಂಗ್ರಹಿಸಲು ತೀರ್ಮಾನಿಸಿತ್ತು. ವಿಜಯ್ ಮಲ್ಯಾರಂತಹ ಉದ್ಯಮಿಗಳು ಸಾಲ ತೆಗೆದುಕೊಂಡು ವಾಪಸ್ ನೀಡಲಾಗದೇ ಇದ್ದಾಗ ಬ್ಯಾಂಕ್ ನಷ್ಟ ಎದುರಿಸಿ, ಜನತೆ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಭರವಸೆ ಕಳೆದುಕೊಳ್ಳದಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಕ್ರಮ ಮಹತ್ವ ಪಡೆದುಕೊಂಡಿತ್ತು.
ಏರ್ ಇಂಡಿಯಾ ಖಾಸಗಿಕರಣ ಪ್ರಸ್ತಾವನೆ
ತೀವ್ರ ನಷ್ಟ ಎದುರಿಸುತ್ತಿದ್ದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ 2017 ರಲ್ಲಿ ಮಹತ್ವದ ನಿರ್ಧಾರ ಕೈಗೊಂಡಿತ್ತು. ಒಟ್ಟು 52,000 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತದ ಮೂಲಕ ಅರ್ಧದಷ್ಟು ಬಂಡವಾಳವನ್ನು ಹಿಂತೆಗೆಯಲು ಸರ್ಕಾರ ನಿರ್ಧರಿಸಿತ್ತು.
ಇನ್ಸಾಲ್ವೆನ್ಸಿ ಮತ್ತು ದಿವಾಳಿ (ತಿದ್ದುಪಡಿ) ಮಸೂದೆ
ವ್ಯಕ್ತಿಗಳನ್ನು ದಿವಾಳಿ ಎಂದು ಘೊಷಿಸಲು ಅವಕಾಶ ಕಲ್ಪಿಸಿದ ಕಳೆದ ವರ್ಷ ಅಂಗೀಕರಿಸಿರುವ ಇನ್ಸಾಲ್ವೆನ್ಸಿ ಆ್ಯಂಡ್ ಬ್ಯಾಂಕ್ರಪ್ಟ್ಸಿ ಕೋಡ್ (ದಿವಾಳಿ ಮತ್ತು ದಿವಾಳಿತನ ಸಂಹಿತೆ) ಜಾರಿಯಾಗಿದ್ದು 2017 ರಲ್ಲಿ. ಸಣ್ಣ ಹೂಡಿಕೆದಾರರನ್ನು ರಕ್ಷಿಸುವ ಉದ್ದೇಶದಿಂದ ಈ ಸಂಹಿತೆಯನ್ನು ಜಾರಿಗೆ ತರಲಾಗಿತ್ತು. ಕಾಯ್ದೆ ಜಾರಿಯಾಗುವುದಕ್ಕೂ ಮುನ್ನ ಇದ್ದ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಕಪ್ಪುಹಣವನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದವು. ನೂತನ ಕಾನೂನಿನಿಂದ ನಕಲಿ ಸಂಸ್ಥೆಗಳ ಹೆಸರಿನಲ್ಲಿ ನಡೆಯುವ ಮೋಸದ ಪ್ರಕರಣಗಳನ್ನು ಪ್ರತಿಬಂಧಿಸಬಹುದಾಗಿದೆ.