ನವದೆಹಲಿ: ಕೇಂದ್ರ ಸರ್ಕಾರದ ಸಲಹೆಯಂತೆ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ನೇತೃತ್ವದ ಹಣಕಾಸು ವಿಷಯಕ್ಕೆ ಸಂಬಂಧಿಸಿದ ಸಂಸತ್ ಸಮಿತಿಗೆ ತಿಳಿಸಿದೆ.
ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಗರಿಷ್ಠ ಮೌಲ್ಯದ ನೋಟ್ ಗಳನ್ನು ಬ್ಯಾನ್ ಮಾಡುವಂತೆ ನವೆಂಬರ್ 7ರಂದು ಸಲಹೆ ಮಾಡಿದ್ದು, ಇದರ ಮಾರನೇ ದಿನವೇ ಕೇಂದ್ರೀಯ ಬ್ಯಾಂಕ್ ನ ಮಂಡಳಿ ನೋಟ್ ನಿಷೇಧಕ್ಕೆ ಶಿಫಾರಸು ಮಾಡಿದೆ ಎಂದು ಆರ್ ಬಿಐ ಸಂಸತ್ ಸಮಿತಿಗೆ ನೀಡಿರುವ ಏಳು ಪುಟಗಳ ವರದಿಯಲ್ಲಿ ತಿಳಿಸಿದೆ.
ನವೆಂಬರ್ 7, 2016ರಂದು ಕೇಂದ್ರ ಸರ್ಕಾರ ನಕಲಿ ನೋಟ್, ಕಪ್ಪುಹಣ ಹಾಗೂ ಭಯೋತ್ಪಾದನೆಗೆ ಕಡಿವಾಣ ಹಾಕಲು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸುವಂತೆ ಸಲಹೆ ನೀಡಿತ್ತು. ಈ ಸಂಬಂಧ ನವೆಂಬರ್ 8ರಂದು ಸಭೆ ಸೇರಿದ ಆರ್ ಬಿಐನ ಕೇಂದ್ರೀಯ ಮಂಡಳಿ, ಸರ್ಕಾರದ ಸಲಹೆಯನ್ನು ಪರಿಗಣಿಸಿ ನೋಟ್ ನಿಷೇಧಿಸಲು ನಿರ್ಧರಿಸಿತು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಸಭೆಯ ನಂತರ ಆರ್ ಬಿಐ ಕೇಂದ್ರೀಯ ಮಂಡಳಿ ನೋಟ್ ನಿಷೇಧಕ್ಕೆ ಶಿಫಾರಸು ಮಾಡುತ್ತದೆ. ಇದಾದ ಕೆಲವೇ ಗಂಟೆಗಳಲ್ಲಿ ತುರ್ತು ಸಂಪುಟ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ರಾತ್ರಿ 8 ಗಂಟೆಗೆ ನೋಟ್ ನಿಷೇಧದ ನಿರ್ಧಾರ ಪ್ರಕಟಿಸುತ್ತಾರೆ.
ಇನ್ನು ನೋಟ್ ನಿಷಧಕ್ಕೆ ಸಂಬಂಧಿಸಿದಂತೆ ಸಂಸತ್ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ವಿವರಣೆ ಕೇಳಿದ್ದು, ಇನ್ನೂ ಉತ್ತರ ನೀಡಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos