ನವದೆಹಲಿ: ನೌಕರರು ಮತ್ತು ಮಾಲೀಕರು ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಬೇಕಾದ ಹಣದ ಮೊತ್ತವನ್ನು ಕಡಿಮೆ ಮಾಡಿ ಶೇಕಡಾ 10ಕ್ಕೆ ನಿಗದಿಪಡಿಸಬೇಕೆಂಬ ಪ್ರಸ್ತಾವನೆಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ ನಾಳೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ.
ಪ್ರಸ್ತುತ ನೌಕರರು ಮತ್ತು ಮಾಲೀಕರು ಮೂಲ ವೇತನದ ಶೇಕಡಾ 12 ರಷ್ಟನ್ನು ನೌಕರರ ಭವಿಷ್ಯನಿಧಿ ಯೋಜನೆ, ನೌಕರರ ಪಿಂಚಣಿ ಯೋಜನೆ, ನೌಕರರ ಠೇವಣಿ ಆಧಾರಿತ ವಿಮಾ ಯೋಜನೆಗೆ ನೀಡಬೇಕಾಗುತ್ತದೆ.
ಮೂಲ ವೇತನದ ಈ ಯೋಜನೆಗಳಿಗೆ ನೀಡಬೇಕಾದ ಮೊತ್ತವನ್ನು ಶೇಕಡಾ 10ಕ್ಕೆ ಇಳಿಸುವಂತೆ ನೌಕರರು ಮತ್ತು ಮಾಲೀಕರು ಮುಂದಿಟ್ಟಿರುವ ಪ್ರಸ್ತಾವನೆ ಬಗ್ಗೆ ನಾಳೆ ಪುಣೆಯಲ್ಲಿ ನಡೆಯಲಿರುವ ನೌಕರರ ಭವಿಷ್ಯ ನಿಧಿ ಸಂಘಟನೆ ಸಭೆಯಲ್ಲಿ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. ಮೂಲ ವೇತನ ಮತ್ತು ತುಟ್ಟಿ ಭತ್ಯೆ ಕುರಿತು ಸಹ ಸಭೆಯಲ್ಲಿ ನಿರ್ಧಾರವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದ ನೌಕರರಿಗೆ ಖರ್ಚು ವೆಚ್ಚ ಮಾಡಲು ಹೆಚ್ಚು ಹಣ ಸಿಗುವುದಲ್ಲದೆ ಮಾಲೀಕರ ಹೊಣೆಗಾರಿಕೆ ಕೂಡ ಕಡಿಮೆಯಾಗುತ್ತದೆ. ಅಂತಿಮವಾಗಿ ಆರ್ಥಿಕತೆ ಹೆಚ್ಚಾಗುತ್ತದೆ ಎಂದು ಹಲವು ಪ್ರತಿನಿಧಿಗಳು ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದಿದ್ದವು.
ಆದರೆ ಇದು ಸಾಮಾಜಿಕ ಭದ್ರತಾ ಯೋಜನೆಗಳನ್ನು ದುರ್ಬಲಗೊಳಿಸುತ್ತವೆ ಎಂದು ಈ ಪ್ರಸ್ತಾವನೆಯನ್ನು ತಿರಸ್ಕರಿಸಲು ವ್ಯಾಪಾರ ಒಕ್ಕೂಟಗಳು ನಿರ್ಧರಿಸಿವೆ.
ಇದು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಹಾಗಾಗಿ ಈ ಪ್ರಸ್ತಾವನೆಯನ್ನು ವಿರೋಧಿಸುತ್ತೇವೆ ಎಂದು ಇಪಿಎಫ್ಒ ಟ್ರಸ್ಟಿ ಮತ್ತು ಭಾರತೀಯ ಮಜ್ದೂರ್ ಸಂಘದ ನಾಯಕ ಪಿ.ಜೆ.ಬನಸುರೆ ಹೇಳಿದ್ದಾರೆ.
ಮೂಲ ಹಣ ನೀಡಿಕೆ ಕಡಿಮೆಯಾಗುವುದರಿಂದ ನೌಕರರಿಗೆ ಸಿಗುವ ಪ್ರಯೋಜನದಲ್ಲಿ ಶೇಕಡಾ 4ರಷ್ಟು ಕಡಿಮೆಯಾಗುತ್ತದೆ. ಪ್ರಸ್ತುತ ನೌಕರರು ಮತ್ತು ಮಾಲೀಕರು ಶೇಕಡಾ 24ರಷ್ಟು ಮೂಲ ವೇತನವನ್ನು ಭವಿಷ್ಯ ನಿಧಿಗೆ ನೀಡುತ್ತಾರೆ. ಅದು ಶೇಕಡಾ 20ಕ್ಕೆ ಕಡಿಮೆಯಾಗುತ್ತದೆ ಎಂದು ಅಖಿಲ ಭಾರತ ವ್ಯಾಪಾರ ಒಕ್ಕೂಟ ಕಾಂಗ್ರೆಸ್ ಕಾರ್ಯದರ್ಶಿ ಡಿ.ಎಲ್.ಸಚ್ ದೇವ್ ತಿಳಿಸಿದ್ದಾರೆ.
ಪ್ರಸ್ತುತ ಕಾರ್ಮಿಕರ ಭವಿಷ್ಯ ನಿಧಿಗೆ ಆತನ ವೇತನದ ಶೇಕಡಾ 12 ಭಾಗ ಸಂದಾಯವಾಗುತ್ತದೆ. ಅದಲ್ಲದೆ ಮಾಲೀಕರಿಂದ ಭವಿಷ್ಯ ನಿಧಿ ಯೋಜನೆಗೆ ಶೇಕಡಾ 3.67, ಪಿಂಚಣಿ ಯೋಜನೆಗೆ ಶೇಕಡಾ 8.33ರಷ್ಟು ನೀಡಲಾಗುತ್ತದೆ.
ಅದರ ಹೊರತಾಗಿ ಮಾಲೀಕರು 0.5ರಷ್ಟು ಮೂಲ ವೇತನವನ್ನು ವಿಮಾ ಸೌಲಭ್ಯಕ್ಕೆ ನೀಡುತ್ತಾರೆ. ಹೀಗೆ ಮಾಲೀಕರೂ ಕೂಡ ನೌಕರರ ವೇತನದ ಶೇಕಡಾ 12.5ರಷ್ಟು ಮೊತ್ತವನ್ನು ನೀಡಬೇಕಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos