ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ ಧನ್ ಯೋಜನೆಯಿಂದಾಗಿ ದೇಶದ ರಾಜ್ಯಗಳಲ್ಲಿ ಆಲ್ಕೋಹಾಲ್ ಮತ್ತು ತಂಬಾಕು ಸೇವನೆ ಮಾಡುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಂಶೋಧನಾ ಘಟಕ ಹೇಳಿದೆ.
ಜನ್ ಧನ್- ಆಧಾರ್ ಮೊಬೈಲ್ ಸರ್ಕಾರದ ಸಬ್ಸಿಡಿಯನ್ನು ಉತ್ತಮ ವಾಗಿ ಬಳಸಿಕೊಳ್ಳಲು ಹಾಗೂ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಲು ಸಹಾಯವಾಗಿದೆ, ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಮತ್ತು ಸಾರಾಯಿ ಬಳಕೆಯಲ್ಲಿ ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ.
2016 ರ ಅಕ್ಟೋಬರ್ ನಿಂದ ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳ ಜನರ ಜೀವನ ಶೈಲಿಯಲ್ಲಿ ಬದಲಾವಣೆ ಉಂಟಾಗಿರುವುದರಿಂದ ವೈದ್ಯಕೀಯ ಸೇವೆಗಳಿಗೆ ಬೇಡಿಕೆ ಹೆಚ್ಚಿದೆ ಎಂದು ವರದಿ ಉಲ್ಲೇಖಿಸಿದೆ.
ಪ್ರಧಾನ ಮಂತ್ರಿಯವರ ಜನ್ ಧನ್ ಯೋಜನೆ ಖಾತೆಗಳಿಂದ ಗ್ರಾಮೀಣ ಭಾಗದಲ್ಲಿ ಹಣ ದುಬ್ಬರ ಕಡಿಮೆ ಮಾಡಿದೆ.
3 ವರ್ಷಗ ಹಿಂದೆ ಜನ್ ಧನ್ ಯೋಜನೆ ಆರಂಭಿಸಿದಾಗಿನಿಂದ ಸುಮಾರು 30 ಕೋಟಿ ಕುಟುಂಬಗಳಿಗೆ ಬ್ಯಾಂಕ್ ಖಾತೆ ಸೌಲಭ್ಯ ದೊರೆತಿದೆ. ಉತ್ತರ ಪ್ರದೇಶದಲ್ಲಿ 23 ಕೋಟಿ ಖಾತೆಗಳು, ನಂತರ ಬಿಹಾರದಲ್ಲಿ 4.7 ಕೋಟಿ, ಹಾಗೆಯೇ ಪಶ್ಚಿಮ ಬಂಗಾಳದಲ್ಲಿ 2.8 ಕೋಟಿ ಖಾತೆಳನ್ನು ಹೊಂದಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅಂದರೆ ಸುಮಾರು ಶೇ. 42 ರಷ್ಟು ಜನ್ ಧನ್ ಖಾತೆಗಳಿವೆ, ಹೀಗಾಗಿ ಪ್ರತಿಯೊಂದು ಕುಟುಂಬಗಳು ಬ್ಯಾಂಕಿಂಗ್ ಸೌಲಭ್ಯ ಹೊಂದುವಂತಾಗಿದೆ. ಶೂನ್ಯ ಖಾತೆಗಳು ಶೇ. 77 ರಿಂದ ಶೇ.20 ರವರೆಗೆ ಇಳಿದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.