ಬೆಂಗಳೂರು: ಕಳೆದ ಕೆಲ ತಿಂಗಳ ಹಿಂದಷ್ಟೇ ಚಿನ್ನದಂತೆಯೇ ದುಬಾರಿಯಾಗಿದ್ದ ಈರುಳ್ಳಿ ಬೆಲೆ ಇದೀಗ ಭಾರೀ ಕುಸಿತ ಕಂಡಿದೆ.
ಈ ಹಿಂದೆ ಇದೇ ಈರುಳ್ಳಿ ದಾಖಲೆ ಪ್ರಮಾಣದಲ್ಲಿ ಬೆಲೆ ಏರಿಕೆ ಕಂಡಿತ್ತು. ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಇದೀಗ ಈರುಳ್ಳಿ, ಬೆಳ್ಳುಳ್ಳಿ ಮತ್ತು ತರಕಾರಿ ಬೆಲೆ ಗಣನೀಯವಾಗಿ ಕುಸಿದಿದೆ. ತರಕಾರಿ ಬೆಲೆ ಇಳಿಕೆ ಗ್ರಾಹಕರದಲ್ಲಿ ಸಂತಸವನ್ನು ತರಿಸಿದೆ. ಆದರೆ, ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ಹೊಸ ಬೆಳೆ ಬಂದಿದ್ದು, ಉತ್ತಮ ಇಳುವರಿಯೂ ಇದೆ. ಮಾರುಕಟ್ಟೆಗೆ ಸೊಪ್ಪು ಸೇರಿದಂತೆ ವಿವಿಧ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿರುವುದರಿಂದ ಬೇಡಿಕೆ ಕಡಿಮೆಯಾಗಿದೆ.
ಈ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಶತಕ ಬಾರಿಸಿದ್ದ ಈರುಳ್ಳಿ ಈಗ ಕೆಜಿ ರೂ.10-12 ಆಗಿದೆ. ಕೆಲವು ದಿನಗಳ ಹಿಂದೆ ರೂ.250 ಇದ್ದ ಬೆಳ್ಳುಳ್ಳಿ ಕೇಜಿಗೆ ರೂ.130-140ಕ್ಕೆ ಇಳಿಕೆಯಾಗಿದೆ. ಮುಂದಿನ ವಾರದೊಳಗೆ ಮತ್ತಷ್ಟು ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.