ನವದೆಹಲಿ: ಕೇಂದ್ರ ಸರ್ಕಾರ ಸೋಮವಾರ ತನ್ನ 'ರಾಜ್ಯಗಳಿಗೆ ವಿಶೇಷ ಗವಾಕ್ಷಿ' ಯೋಜನೆಯಡಿ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಎರಡನೇ ಹಂತದಲ್ಲಿ 6 ಸಾವಿರ ಕೋಟಿ ರೂ. ಜಿಎಸ್ಟಿ ಮರುಪಾವತಿ ಬಿಡುಗಡೆ ಮಾಡಿದೆ.
ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಮತ್ತು ಉತ್ತರಾಖಂಡ ರಾಜ್ಯಗಳು ಮತ್ತು ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್ಟಿ ಹಣ ದೊರೆತಿದೆ.
ಇಲ್ಲಿಯವರೆಗೆ 21 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ಗವಾಕ್ಷಿ ಯೋಜನೆಯಡಿ ಜಿಎಸ್ಟಿ ಮರುಪಾವತಿಗಾಗಿ ಮನವಿ ಮಾಡಿದ್ದವು.
ಕೇಂದ್ರ ಸರ್ಕಾರ ಅಕ್ಟೋಬರ್ 23 ರಂದು ಮೊದಲ ಹಂತದಲ್ಲಿ 16 ರಾಜ್ಯಗಳಿಗೆ ಮತ್ತು ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ 6 ಸಾವಿರ ಕೋಟಿ ಜಿಎಸ್ ಟಿ ಪರಿಹಾರವನ್ನು ವರ್ಗಾಯಿಸಿತ್ತು.