ಏರ್ ಇಂಡಿಯಾ ಸಿಇಒ ಕ್ಯಾಂಪ್ ಬೆಲ್ ವಿಲ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಉತ್ತರಾಧಿಕಾರಿ ನೇಮಕವಾಗುವವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟಾಟಾ ಗ್ರೂಪ್ಗೆ ಸೇರಿದ ಈ ಏರ್ಲೈನ್ ಎದುರಿಸುತ್ತಿರುವ ಕಾರ್ಯಾಚರಣಾ ಸವಾಲುಗಳು, ಹೆಚ್ಚುತ್ತಿರುವ ವೆಚ್ಚಗಳು ಮತ್ತು ಇದುವರೆಗಿನ ಅತಿ ದೊಡ್ಡ ವಾರ್ಷಿಕ ನಷ್ಟದ ಅಂದಾಜುಗಳ ನಡುವೆ ಈ ನಾಯಕತ್ವ ಬದಲಾವಣೆ ನಡೆದಿದೆ.
ಎರ್ ಇಂಡಿಯಾ ಈ ರಾಜೀನಾಮೆಯ ಕುರಿತು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ವರದಿಗಳ ಪ್ರಕಾರ, 2025-26 ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಸುಮಾರು 20,000 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಪಶ್ಚಿಮ ಏಷ್ಯಾದ ವಾಯುಪ್ರದೇಶಗಳ ಪದೇಪದೇ ಮುಚ್ಚುವಿಕೆ, ಪಾಕಿಸ್ತಾನದಲ್ಲಿ ಕಳೆದ ವರ್ಷದ ಮಾರ್ಚ್ನಿಂದ ಶಾಶ್ವತ ಮುಚ್ಚುವಿಕೆ, ಹೆಚ್ಚುತ್ತಿರುವ ವೆಚ್ಚಗಳು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಇವುಗಳ ಪರಿಣಾಮವಾಗಿ ನಷ್ಟಗಳು ಹೆಚ್ಚಾಗಿವೆ.
ಈ ಸವಾಲುಗಳನ್ನು ಮತ್ತಷ್ಟು ಗಂಭೀರಗೊಳಿಸಿದದ್ದು ಕಳೆದ ವರ್ಷ ಜೂನ್ 12ರಂದು ನಡೆದ ಅಹಮದಾಬಾದ್ (ಫ್ಲೈಟ್ AI 171) ದುರಂತ. ಅದರಲ್ಲಿ 241 ಮಂದಿ ಮೃತಪಟ್ಟಿದ್ದರು. ವಿಲ್ಸನ್ ಅವರ ರಾಜೀನಾಮೆಯನ್ನು ಕಳೆದ ವಾರ ನಡೆದ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾಗಿದೆ. ಅವರ ಐದು ವರ್ಷದ ಅವಧಿ 2027ರ ಸೆಪ್ಟೆಂಬರ್ನಲ್ಲಿ ಮುಗಿಯಬೇಕಾಗಿದ್ದರೂ, ಅವರು ಅಹಮದಾಬಾದ್ ಅಪಘಾತದ ಅಂತಿಮ ವರದಿ ಹೊರಬರುವವರೆಗೆ ಏರ್ ಇಂಡಿಯಾ ಸಿಇಒ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
ಕ್ಯಾಂಪ್ ಬೆಲ್ ವಿಲ್ಸನ್ ಅವರು ಸೆಪ್ಟೆಂಬರ್ 2022ರಲ್ಲಿ, ಏರ್ ಇಂಡಿಯಾ ಖಾಸಗೀಕರಣದ ನಂತರ ಕಂಪನಿಗೆ ಸೇರಿದ್ದರು.
ಈ ನಡುವೆ, ಭಾರತದ ಅತಿದೊಡ್ಡ ಏರ್ಲೈನ್ ಇಂಡಿಗೊದ ಸಿಇಒ ಪೀಟರ್ ಎಲ್ಬರ್ಸ್ ಕೂಡ ತಮ್ಮ ಹುದ್ದೆ ತೊರೆದಿದ್ದಾರೆ. ಈ ಘಟನೆ, ಮೂರು ತಿಂಗಳ ಹಿಂದೆ ನಡೆದ ಕಾರ್ಯಾಚರಣಾ ವ್ಯತ್ಯಯಗಳ ನಂತರ ಸಂಭವಿಸಿದೆ.
ಇಂಡಿಗೋಗೆ ಮಾಲೀಕತ್ವ ಹೊಂದಿರುವ ಇಂಟರ್ ಗ್ಲೋಬ್ ಏವಿಯೇಷನ್ ಕಂಪನಿಯು ವಿಲಿಯಮ್ ವಾಲ್ಸ್ ಅವರನ್ನು ಸಿಇಒ ಆಗಿ ನೇಮಕ ಮಾಡಿದೆ. ಅವರು ಪ್ರಸ್ತುತ ಅಂತಾರಾಷ್ಟ್ರೀಯ ವಾಯುಸಾರಿಗೆ ಸಂಸ್ಥೆಯ (IATA) ನಿರ್ದೇಶಕ ಜನರಲ್ ಆಗಿದ್ದು, ಮೊದಲು ಬ್ರಿಟಿಷ್ ಏರ್ ವೇಸ್ ಸಿಇಒ ಆಗಿದ್ದರು.