ಮುಂಬೈ: ಭಾರತೀಯ ವಿಮಾನಯಾನ ವಲಯವು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ ಮತ್ತು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವು ಪರಿಸ್ಥಿತಿ ಎದುರಾಗಿದೆ ಎಂದು ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್ಜೆಟ್ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಏವಿಯೇಷನ್ ಟರ್ಬೈನ್ ಇಂಧನ(ಎಟಿಎಫ್) ಬೆಲೆ ತೀವ್ರ ಹೆಚ್ಚುತ್ತಿದ್ದು, ತಕ್ಷಣವೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಹೆಚ್ಚುವರಿ ಆರ್ಥಿಕ ಬೆಂಬಲ ಘೋಷಿಸಬೇಕು ಎಂದು ವಿಮಾನಯಾನ ಸಂಸ್ಥೆಗಳು ಕೋರಿವೆ.
ಪಶ್ಚಿಮ ಏಷ್ಯಾದ ಪ್ರಕ್ಷುಬ್ಧತೆಯು ತೈಲ ಬೆಲೆಗಳನ್ನು ಹೆಚ್ಚಿಸಿದೆ ಮತ್ತು ವಾಯುಪ್ರದೇಶದ ನಿರ್ಬಂಧಗಳು ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದೆ. ವಿಶೇಷವಾಗಿ ದೀರ್ಘ-ಪ್ರಯಾಣದ ಮಾರ್ಗಗಳಲ್ಲಿ.
ಏವಿಯೇಷನ್ ಟರ್ಬೈನ್ ಇಂಧನ(ಎಟಿಎಫ್) ವೆಚ್ಚ ವಿಮಾನ ಕಾರ್ಯಾಚರಣೆಯ ಒಟ್ಚು ವೆಚ್ಚದ ಸುಮಾರು ಶೇ. 40 ರಷ್ಟಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ಈ ಸಂಬಂಧ ಫೆಡರೇಶನ್ ಆಫ್ ಇಂಡಿಯನ್ ಏರ್ಲೈನ್ಸ್(ಎಫ್ಐಎ), ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಹಿಂದೆ ಕ್ರ್ಯಾಕ್ ಬ್ಯಾಂಡ್ ಸ್ಥಾಪನೆಯೊಂದಿಗೆ ಮಾಡಿದಂತೆ, ದೇಶೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ ಒಂದೇ ರೀತಿಯ ಇಂಧನ ಬೆಲೆ ನಿಗದಿ ಕಾರ್ಯವಿಧಾನವನ್ನು ಏಕರೂಪವಾಗಿ ವಿಸ್ತರಿಸಲು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.
"ಉಳಿದುಕೊಳ್ಳಲು, ಉಳಿಸಿಕೊಳ್ಳಲು ಮತ್ತು ಕಾರ್ಯಾಚರಣೆಯನ್ನು ಮುಂದುವರಿಸಲು, ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ತಕ್ಷಣದ ಮತ್ತು ಅರ್ಥಪೂರ್ಣ ಆರ್ಥಿಕ ಸಹಾಯಕ್ಕಾಗಿ ನಿಮ್ಮ ತುರ್ತು ಮಧ್ಯ ಪ್ರವೇಶಕ್ಕೆ ನಾವು ವಿನಂತಿಸುತ್ತೇವೆ" ಎಂದು ಏಪ್ರಿಲ್ 26 ರಂದು ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೆ, ವಿಮಾನಯಾನ ಸಂಸ್ಥೆಗಳು ಎಟಿಎಫ್ ಮೇಲಿನ ಅಬಕಾರಿ ಸುಂಕವನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಕೋರಿವೆ. ಇದು ಶೇಕಡಾ 11 ರಷ್ಟಿದೆ.