ಬೆಂಗಳೂರು: ಒಂದು ಸರಳ ಪ್ರೇಮ ಕಥೆ ಚಿತ್ರದ ಯಶಸ್ಸಿನ ಬಳಿಕ ಬಹುಭಾಷಾ ನಟಿ ಸ್ವಾತಿಷ್ಟ ಕೃಷ್ಣನ್ ಇದೇ ಮೊದಲ ಬಾರಿಗೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ಜೋಡಿಯಾಗಿ ಅತಿಕಾಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಮಿಂಚಲು ಸಿದ್ಧರಾಗುತ್ತಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ಧಾರವಾಡದ ಮೂಲದವರಾದ ಸ್ವಾತಿಷ್ಟ ಕೃಷ್ಣನ್, ಈಗಾಗಲೇ ಕನ್ನಡದೊಂದಿಗೆ ತಮಿಳು ಹಾಗೂ ತೆಲಗು ಸಿನಿರಂಗದಲ್ಲಿ ಸಾವರಕಥಿ, ಕೀ, ವಿಕ್ರಮ್, ಗುಂಡೆ ಕಥಾ ವಿಂತರಾ, ಒಂದು ಸರಳ ಪ್ರೇಮ ಕಥೆ ಮತ್ತು ರಕ್ಕಸಪುರದೊಳ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಸರು ಮಾಡಿದ್ದಾರೆ. ಇನ್ನು, ನಿರ್ದೇಶಕರ ಪ್ರಕಾರ, ಈ ಚಿತ್ರದಲ್ಲಿ ಸ್ವಾತಿಷ್ಟ ಅವರ ಪಾತ್ರವು ಕೇವಲ ಗ್ಲಾಮರ್-ಡಾನ್ಸ್ಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಇಡೀ ಕಥೆಗೆ ದೊಡ್ಡ ತಿರುವು ನೀಡುವಂತಹ ಗಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಾಕೊಲೇಟ್ ಬಾಯ್ ಟು ರಗಡ್ ಲುಕ್
ರಂಗಿತರಂಗ ಚಿತ್ರದ ಮೂಲಕ ಲವರ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಿರೂಪ್ ಭಂಡಾರಿ, ಈ ಚಿತ್ರದಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ಸಂಪೂರ್ಣ ಮಾಸ್ ಮತ್ತು ರಗಡ್ ಅವತಾರದಲ್ಲಿ ಅಬ್ಬರಿಸಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಫರ್ಸ್ಟ್ ಲುಕ್ ಪೋಸ್ಟರ್ಗಳಲ್ಲಿ ನಿರೂಪ್ ರಕ್ತಸಿಕ್ತವಾಗಿ, ಖಡಕ್ ಲುಕ್ನಲ್ಲಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಈ ಮೂಲಕ ನಿರೂಪ್ ಮತ್ತು ಸ್ವಾತಿಷ್ಟ ಅವರ ಕೆಮಿಸ್ಟ್ರಿ ಬೆಳ್ಳಿತೆರೆಯ ಮೇಲೆ ಹೊಸ ಮ್ಯಾಜಿಕ್ ಸೃಷ್ಟಿಸಲಿದೆ ಎನ್ನಲಾಗಿದೆ.
ಮುಂದುವರೆದು, ಎ.ಎನ್ ಮೂವಿ ಮೇಕರ್ಸ್ ಮತ್ತು ನಿಹಾಲ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣ ಹಾಗೂ ಶ್ರೀನಿವಾಸ್ ಪಿ. ಬಾಬು ಅವರ ಸಂಕಲನ ಈ ಚಿತ್ರಕ್ಕಿದ್ದು, ಚಿತ್ರದಲ್ಲಿ ಹರೀಶ್ ರೈ, ಕಾಕ್ರೋಚ್ ಸುಧಿ, ದಿನೇಶ್ ಮಂಗಳೂರು, ಬಿ. ಸುರೇಶ್, ಮತ್ತು ವರ್ಧನ್ ತೀರ್ಥಹಳ್ಳಿ ಅವರಂತಹ ಪ್ರಮುಖ ಕಲಾವಿದರ ದೊಡ್ಡ ದಂಡೇ ಇದೆ ಎನ್ನಲಾಗಿದೆ.