ಸಲ್ಮಾನ್ ಖಾನ್(ಸಂಗ್ರಹ ಚಿತ್ರ) 
ಬಾಲಿವುಡ್

ಹೊಸಬರಿಗೆ ಇದು ಕಠಿಣ ಸಮಯ: ಸಲ್ಮಾನ್ ಖಾನ್

ದೊಡ್ಡ ನಟರ ಮಕ್ಕಳನ್ನು ಸಿನಿಮಾಗಳಿಗೆ ಪರಿಚಯಿಸುವುದು ಹಿಂದೆ ಸುಲಭವಾಗುತ್ತಿತ್ತು. ಆದರೆ ಈಗ ಎಲ್ಲಾ ಹೊಸಬರು ಉತ್ತಮ ತರಬೇತಿ ಪಡೆದು ಬರುವುದರಿಂದ...

ಮುಂಬೈ: ದೊಡ್ಡ ನಟರ ಮಕ್ಕಳನ್ನು ಸಿನಿಮಾಗಳಿಗೆ ಪರಿಚಯಿಸುವುದು ಹಿಂದೆ ಸುಲಭವಾಗುತ್ತಿತ್ತು. ಆದರೆ ಈಗ ಎಲ್ಲಾ ಹೊಸಬರು ಉತ್ತಮ ತರಬೇತಿ ಪಡೆದು ಬರುವುದರಿಂದ ಅಷ್ಟು ಸುಲಭವಾಗಿ ಪರಿಚಯಿಸಲು ಸಾಧ್ಯವಾಗುವುದಿಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಗೆ ಅನೇಕ ಹೊಸ ನಟ-ನಟಿಯರನ್ನು ಪರಿಚಯಿಸಿದ ಕೀರ್ತಿ 49 ವರ್ಷದ ಸಲ್ಮಾನ್ ಖಾನ್ ಗೆ ಸಲ್ಲುತ್ತದೆ. ಇಂದು ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸೋನಾಕ್ಷಿ ಸಿನ್ಹಾ, ಕತ್ರಿನಾ ಕೈಫ್, ಝರೀನ್ ಖಾನ್ ಮತ್ತು ಡೈಸಿ ಶಾ ಅವರುಗಳು ಸಲ್ಮಾನ್ ಖಾನ್ ಪರಿಚಯಿಸಿದ ಪ್ರತಿಭೆಗಳು. ಈಗ ಅವರು ಸುನಿಲ್ ಶೆಟ್ಟಿ ಅವರ ಮಗಳು ಅತಿಯಾ ಶೆಟ್ಟಿ ಮತ್ತು ಆದಿತ್ಯ ಪಂಚೋಲಿ ಪುತ್ರ ಸೂರಜ್ ಪಂಚೋಲಿಯನ್ನು ತಮ್ಮ ಹೋಂ ಪ್ರೊಡಕ್ಷನ್ ನ ಚಿತ್ರ 'ಹೀರೋ'ದಲ್ಲಿ ಪರಿಚಯಿಸುತ್ತಿದ್ದಾರೆ.

ಇಂದು ನಟನಾ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರೂ ಉತ್ತಮ ತರಬೇತಿ ಪಡೆದು ಬಂದಿರುತ್ತಾರೆ. ಅವರು ಎಲ್ಲಾ ವಿಷಯಗಳ ಬಗ್ಗೆಯೂ ಗಮನ ಹರಿಸುತ್ತಾರೆ. ಅವರ ನೋಟ, ದೈಹಿಕ ಭಾಷೆ, ಡ್ಯಾನ್ಸ್ ಹೀಗೆ ಪ್ರತಿಯೊಂದಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. ನಮ್ಮ ಕಾಲದಲ್ಲಿ ಯಾರು ಬೇಕಾದರೂ ನಟನಾ ವೃತ್ತಿಗೆ ಬರಬಹುದಾಗಿತ್ತು. ಆದರೆ ಈಗ ಕಷ್ಟ ಇದೆ ಎಂದು ಸಲ್ಮಾನ್ ಖಾನ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇಂದು ಸಿನಿಮಾಗಳ ಬಜೆಟ್ ದ್ವಿಗುಣಗೊಂಡಿದೆ ಮತ್ತು ಸ್ಪರ್ಧೆ ಕೂಡ ಜಾಸ್ತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

''ಮೈನೆ ಪ್ಯಾರ್ ಕಿಯಾ'' ಸಿನಿಮಾವನ್ನು 1 ಕೋಟಿ 11 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಯಿತು. ಆದರೆ ಇಂದು ಎರಡು ದಿನಗಳ ಸಿನಿಮಾ ಶೂಟಿಂಗ್ ಗೆ ಅಷ್ಟು ದುಡ್ಡು ಬೇಕು. ಇಂದು ಒಂದರ್ಥದಲ್ಲಿ ಕಷ್ಟ ಹೆಚ್ಚು, ಸಿನಿಮಾ ತಯಾರಿಸಲು ಸಾಕಷ್ಟು ಬಜೆಟ್ ಬೇಕಾಗುತ್ತದೆ. ಹಿಂದೆ ಜನರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದರು. ಆದರೆ ಈಗ ಹಣ ವ್ಯರ್ಥವಾಗುವ ಭಯದಿಂದ ರಿಸ್ಕ್ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಎಂದರು.

ಹೊಸ ಮುಖಗಳಾದ ಸೂರಜ್ ಮತ್ತು ಅತಿಯಾ ಅವರ ಬಗ್ಗೆ ತಾವು ಪರಿಚಯಿಸುವುದಕ್ಕಿಂತ ಅವರೇ ಪ್ರಚಾರ ಮಾಡಿಕೊಳ್ಳುವುದು ಉತ್ತಮ. ನಾನು ಪ್ರಚಾರದಲ್ಲಿ ಅಷ್ಟೊಂದು ಭಾಗಿಯಾಗಿಲ್ಲ, ಅವರನ್ನೇ ಮುಂದೆ ಕಳುಹಿಸುತ್ತಿದ್ದೇನೆ. ಅವರು ನನ್ನ ಮಾತುಗಳನ್ನು ಕೇಳುವುದಿಲ್ಲ. ಅವರೇ ಪ್ರಚಾರ ಮಾಡಿಕೊಳ್ಳಲಿ. ಆದರೆ ಜನರಿಗೆ ಅವರು ಉತ್ಸಾಹಿಗಳಂತೆ ಕಾಣಬೇಕು ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ಹೀರೋ ಸಿನಿಮಾ ಇದೇ 11ರಂದು ತೆರೆಗೆ ಬರಲಿದೆ. ಇದು ಚಿತ್ರದ ಅದೃಷ್ಟ ಮಾತ್ರವಲ್ಲದೆ ಸೂರಜ್ ಮತ್ತು ಅತಿಯಾ ಅವರ ವೃತ್ತಿ ಜೀವನದಲ್ಲಿಯೂ ಪ್ರಮುಖವಾಗಲಿದೆ. ಬಾಲಿವುಡ್ ಪ್ರೇಮಿಗಳು ಹೀರೋ ಚಿತ್ರವನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಜರಾತ್ ಜನರು ಅನಕ್ಷರಸ್ಥರು.. ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge

ಅಂತ್ಯ ಸನ್ನಿಹಿತ?: ಇರಾನ್ ನತ್ತ ಮುಖ ಮಾಡಿದ ಅಮೆರಿಕದ ಅತ್ಯಂತ ವಿಧ್ವಂಸಕ ಕ್ಷಿಪಣಿ

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

IPL 2026: ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ Virat Kohli; ಮತ್ತೆ ನಂಬರ್ 1 ಪಟ್ಟ!

IPL 2026: ಕೊನೆಗೂ ಗೆದ್ರಲ್ಲಪ್ಪಾ..; SRH ವಿರುದ್ಧ LSG ಭರ್ಜರಿ ಜಯ; ಮೈದಾನದಲ್ಲೇ Rishabh Pant ಬಿಗಿದಪ್ಪಿದ Sanjiv Goenka

SCROLL FOR NEXT