ಬಾಲಿವುಡ್

ಪಾನ್‌ಮಸಾಲ ಜಾಹೀರಾತಿನಲ್ಲಿ ನಟಿಸಬೇಡಿ ಎಂದು ನಿಮ್ಮ ಪತಿಗೆ ಹೇಳಿ

Rashmi Kasaragodu
ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್ ಸೇರಿದಂತೆ ಇತರ ನಾಲ್ವರು ನಟರ ಹೆಂಡತಿಯರಿಗೆ ದೆಹಲಿಯ ಆಮ್ ಆದ್ಮಿ ಸರ್ಕಾರ ಪತ್ರವೊಂದನ್ನು ಕಳುಹಿಸಿದೆ. ಪಾನ್ ಮಸಾಲ (ಹೊಗೆಸೊಪ್ಪು ) ಉತ್ಪನ್ನಗಳು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂಬ ವಿಷಯವನ್ನು ಉಲ್ಲೇಖಿಸಿ, ಇಂಥಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳದಂತೆ ನಿಮ್ಮ ಪತಿಯಲ್ಲಿ ಹೇಳಿ ಎಂದು ಸರ್ಕಾರ ಈ ಪತ್ರದಲ್ಲಿ ವಿನಂತಿಸಿದೆ. 
ಇಂಥಾ ಜಾಹೀರಾತುಗಳಲ್ಲಿ ನಟಿಸದಂತೆ ನಟರಲ್ಲಿ ಬಿನ್ನವಿಸಿಕೊಂಡಿದ್ದರೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗದೇ ಇರುವ ಕಾರಣ ನಟರ ಪತ್ನಿಗೆ ಪತ್ರಗಳನ್ನು ಕಳುಹಿಸಲಾಗಿದೆ.
ಅಜಯ್ ದೇವಗನ್, ಅರ್‌ಬಾಜ್ ಖಾನ್, ಶಾರುಖ್ ಖಾನ್ ಮತ್ತು ಗೋವಿಂದ ಅವರ ಪತ್ನಿಯರಿಗೆ ದೆಹಲಿ ರಾಜ್ಯ ಆರೋಗ್ಯ ಸಚಿವಾಲಯ ಈ ರೀತಿಯ ಪತ್ರವನ್ನು ಕಳುಹಿಸಿದೆ. ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶಾರುಖ್ ಖಾನ್ ಅವರನ್ನು ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಬಾರದೆಂದು ನೀವು ಅವರಲ್ಲಿ ಹೇಳಬೇಕೆಂದು ನಾವು ಈ ಮೂಲಕ ವಿನಂತಿಸುತ್ತೇವೆ ಎಂದು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರಿಗೆ ಕಳುಹಿಸಿದ ಪತ್ರದಲ್ಲಿ ಹೇಳಲಾಗಿದೆ.
ಈ ಹಿಂದೆ ಇಂಥಾ ಜಾಹೀರಾತುಗಳಲ್ಲಿ ನಟಿಸಬೇಡಿ ಎಂದು ಶಾರುಖ್‌ಖಾನ್ ಅವರಿಗೆ ಪತ್ರ ಕಳಿಸಿದ್ದರೂ, ಶಾರುಖ್ ಇದನ್ನು ಲೆಕ್ಕಿಸದೆ ಇಂಥಾ ಜಾಹೀರಾತುಗಳಲ್ಲಿ ನಟನೆ ಮುಂದುವರಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದೇ ರೀತಿಯ ಒಕ್ಕಣೆಯಿರುವ ಪತ್ರವನ್ನೇ ಇತರ ನಟರ ಪತ್ನಿಯರಿಗೂ ಕಳುಹಿಸಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.
SCROLL FOR NEXT