'ಎಂ ಎಸ್ ಧೋನಿ: ಆನ್ ಅಂಟೋಲ್ಡ್ ಸ್ಟೋರಿ' ಪ್ರಚಾರ ಕಾರ್ಯಕ್ರಮದಲ್ಲಿ ಧೋನಿ
ನವದೆಹಲಿ: ತಮ್ಮ ಬಯೋಪಿಕ್ 'ಎಂ ಎಸ್ ಧೋನಿ: ಆನ್ ಅಂಟೋಲ್ಡ್ ಸ್ಟೋರಿ' ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿರುವ ಭಾರತದ ಒಂದು ದಿನದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಸಿನೆಮಾ ಕಲ್ಪನೆ ಬಂದ ಸಮಯದಲ್ಲಿ ತಮ್ಮ ಜೀವನದಲ್ಲಿ ಯಾವುದೇ ವಿಲನ್ ಗಳು ಇಲ್ಲದೆ ಇದ್ದರಿಂದ, ಸಿನೆಮಾ ಮಾಡಲು ಹೇಗೆ ಸಾಧ್ಯ ಎಂದು ತಿಳಿದು ಪರವಾನಗಿ ನೀಡಲು ಹಿಂಜರಿದಿದ್ದರು ಎಂದು ತಿಳಿಸಿದ್ದಾರೆ.
ನೀರಜ್ ಪಾಂಡೆ ನಿರ್ದೇಶನದ ಈ ಸಿನೆಮಾದಲ್ಲಿ ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದು, ಧೋನಿ ಅವರ ದೀರ್ಘ ಕಾಲದ ಗೆಳೆಯ ಅರುಣ್ ಪಾಂಡೆ ನಿರ್ಮಾಪಕ.
ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಸಿಇಒ ವಿಜಯ್ ಸಿಂಗ್ ಜೊತೆಗೆ ದೆಹಲಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧೋನಿ, ಪಾಂಡೆ ಮೊದಲ ಬಾರಿಗೆ ಒಪ್ಪಿಗೆ ಪಡೆಯಲು ಬಂದಾಗ ತಾವು ಹಿಂಜರಿದಿದ್ದನ್ನು ನೆನಪಿಸಿಕೊಳ್ಳುತ್ತಾರೆ.
"ಅರುಣ್ ಪಾಂಡೆ ಈ ಐಡಿಯಾ ಹಿಡಿದು ಮೊದಲ ಬಾರಿಗೆ ನನ್ನನ್ನು ಭೇಟಿ ಮಾಡಿದಾಗ ನಾನು ಹೆಚ್ಚು ಗಮನ ಹರಿಸಲಿಲ್ಲ. ಆದರೆ ಅವರು ಹಿಂದಿರುಗಿ ಡೀಲ್ ಸಂಪೂರ್ಣಗೊಳಿಸಿದ್ದೇನೆ ಎಂದಾಗ ತೊಂದರೆ ಶುರುವಾಯಿತು. ಆಗ ನನಗೆ ಹಿಂದೆ ಸರಿಯಲು ಸಾಧ್ಯವಾಗಲಿಲ್ಲ. ಈ ಸಿನೆಮಾ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸುಮ್ಮನಾದೆ" ಎಂದು ನಟ ಗೌರವ್ ಕಪೂರ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಧೋನಿ ಹೇಳಿದ್ದಾರೆ.
"ನಂತರ ನನ್ನ ಕಥೆಯನ್ನು ಬಿಚ್ಚಿಟ್ಟು ನನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಅವರಿಗೆ ಹೇಳಿದೆ. ಇದು ನನ್ನ ಜೀವನದ ಪ್ರಮುಖ ಅಧ್ಯಾಯಗಳನ್ನು ತೆರೆದಿಡುತ್ತದೆ" ಎಂದು ಕೂಡ ಅವರು ಹೇಳಿದ್ದಾರೆ.
ಮೊದಲ ಬಾರಿಗೆ ಈ ಸಿನೆಮಾದ ಆಯಾಮ ನನಗೆ ತಿಳಿಯಲಿಲ್ಲ ಎನ್ನುವ ಅವರು "ಈ ಸಿನೆಮಾ ಯಾವ ಆಯಾಮದಲ್ಲಿ ನಿರ್ದೇಶಿಸುತ್ತಾರೆ ಎಂಬುದೇ ತಿಳಿಯಲಿಲ್ಲ. ನನ್ನ ಜೀವನದಲ್ಲಿ ಯಾವುದೇ ವಿಲನ್ ಗಳು ಇರಲಿಲ್ಲ. ಆದುದರಿಂದ ನನ್ನ ಜೀವನದಲ್ಲಿ ತೆಗೆದುಕೊಂಡ ನಿರ್ಧಾರ ಮತ್ತು ಜೀವನದಲ್ಲಿ ವಿನಯಪೂರ್ವಕವಾಗಿ ಇರುವುದರ ಬಗ್ಗೆ ಇರುತ್ತದೆ" ಎಂದು ತಿಳಿದೆ ಎಂದು ವಿವರಿಸುತ್ತಾರೆ.
ಧೋನಿ ಅವರ ಬಾಲ್ಯದಿಂದ ಅವರು ಭಾರತಕ್ಕೆ 2011 ರಲ್ಲಿ ವಿಶ್ವಕಪ್ ಗೆದ್ದ ತನಕ ಜೀವನವನ್ನು ಹಿಡಿದಿಡುವ ಈ ಚಿತ್ರ ಭಾರತದಾದ್ಯಂತ 4500 ತೆರೆಗಳಲ್ಲಿ ಮತ್ತು ವಿಶ್ವದಾದ್ಯಂತ 1000 ತೆರೆಗಳಲ್ಲಿ ಶುಕ್ರವಾರ ಬಿಡುಗಡೆಯಾಗಲಿದೆ.
"ಈ ಸಿನೆಮಾದ ಮುಂದಿನ ಭಾಗ ಬರುವುದರ ಅಗತ್ಯವಿಲ್ಲ ಏಕೆಂದರೆ ಅದು ಬಹಳ ವಿವಾದಾತ್ಮಕವಾಗುತ್ತದೆ. 2011 ರ ನಂತರ ನನ್ನ ಜೀವನದಲ್ಲಿ ಬರೀ ವಿದಾದಗಳಷ್ಟೇ ಮತ್ತೇನಿಲ್ಲ. ಅಲ್ಲಿ ಬರೀ ವಿಲನ್ ಗಳು ಇರುತ್ತಾರೆ" ಎಂದಿದ್ದಾರೆ ಧೋನಿ.
ಈ ಸಿನೆಮಾದಲ್ಲಿ ಅನುಪಮ್ ಖೇರ್, ರಾಜೇಶ್ ಶರ್ಮ ಮತ್ತು ಭೂಮಿಕಾ ಚಾವ್ಲಾ ಕೂಡ ನಟಿಸಿದ್ದಾರೆ.