ಕೋಲ್ಕತ್ತಾ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಇತ್ತೀಚೆಗೆ ಕೋಲ್ಕತ್ತಾದಲ್ಲಿ ಪವಾಡಸದೃಶ ರೀತಿಯಲ್ಲಿ ಕಾರು ಅಪಘಾತದಿಂದ ಪಾರಾದ ಘಟನೆ ಕಳೆದ ವಾರ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಟ್ರಾವೆಲ್ ಏಜೆನ್ಸಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಕಳೆದ ವಾರ 23ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಜ್ಯ ಸರ್ಕಾರದ ಆಹ್ವಾನದ ಮೇರೆಗೆ ಆಗಮಿಸಿದ್ದರು. ಕಳೆದ ಶನಿವಾರ ಬೆಳಗ್ಗೆ ಚಿತ್ರೋತ್ಸವ ಮುಗಿಸಿ ಮುಂಬೈಗೆ ತೆರಳಲು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ನೀಡಿದ ಆತಿಥ್ಯದಂತೆ ಮರ್ಸಿಡಿಸ್ ಕಾರಿನಲ್ಲಿ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಕಾರಿನ ಹಿಂದಿನ ಚಕ್ರ ಡಫ್ಫರಿನ್ ರಸ್ತೆಯಲ್ಲಿ ಕಾರಿನಿಂದ ಬೇರ್ಪಟ್ಟಿತು. ಟ್ರಾವೆಲ್ ಏಜೆನ್ಸಿ ಸರ್ಕಾರಕ್ಕೆ ಕಾರನ್ನು ಒದಗಿಸಿದ್ದು ಘಟನೆ ಹಿನ್ನೆಲೆಯಲ್ಲಿ ಸರ್ಕಾರ ಏಜೆನ್ಸಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ಬಚ್ಚನ್ ಅವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಟ್ರಾವೆಲ್ ಏಜೆನ್ಸಿಗೆ ಭಾರೀ ಮೊತ್ತ ನೀಡಲಾಗಿತ್ತು ಎಂದು ಸರ್ಕಾರದ ಸಚಿವಾಲಯದ ಹಿರಿಯ ಅಧಿಕಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ದೃಢಪಡಿಸಿದ್ದಾರೆ.
ವಾಹನದ ಕ್ಷಮತೆ ಪ್ರಮಾಣಪತ್ರದ ಅವಧಿ ಕೆಲವು ಸಮಯಗಳ ಹಿಂದೆಯೇ ಮುಗಿದಿತ್ತು. ಆದರೂ ಬಳಕೆ ಮಾಡಲಾಗುತ್ತಿತ್ತು. ಅದುವೇ ಅಪಘಾತಕ್ಕೆ ಕಾರಣ ಎಂದು ತನಿಖೆಯಿಂದ ಬಹಿರಂಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಮೂಲಗಳ ಪ್ರಕಾರ, ಟ್ರಾವೆಲ್ ಏಜೆನ್ಸಿಯ ಕಡೆಯಿಂದ ಏನಾದರೂ ತಪ್ಪುಗಳು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಅಮಿತಾಬ್ ಬಚ್ಚನ್ ಜೊತೆ ಕಾರಿನಲ್ಲಿ ಕೋಲ್ಕತ್ತಾ ಸರ್ಕಾರದ ಹಿರಿಯ ಸಚಿವರೊಬ್ಬರಿದ್ದರು.
ಘಟನೆ ಬಳಿಕ ಸಚಿವರ ಕಾರಿನಲ್ಲಿ ಬಚ್ಚನ್ ಅವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು ಎಂದು ಕೋಲ್ಕತ್ತಾ ಟ್ರಾಫಿಕ್ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos