ನವದೆಹಲಿ: ಪದ್ಮಾವತಿ ಚಿತ್ರ ವಿವಾದಕ್ಕೆ ಸಂಬಂಧಪಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೌನವನ್ನು ಹಿರಿಯ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ.
ಪದ್ಮಾವತಿ ಚಿತ್ರಕ್ಕೆ ಸಂಬಂಧಪಟ್ಟಂತೆ ಇಷ್ಟೊಂದು ವಿವಾದಗಳು ನಡೆಯುತ್ತಿರುವಾಗ ಹಿರಿಯ ನಟರಾದ ಅಮಿತಾಬ್ ಬಚ್ಚನ್, ಅಮೀರ್ ಖಾನ್ ಹಾಗೂ ಶಾರೂಕ್ ಖಾನ್ ರಂಥ ಖ್ಯಾತ ನಟರು ಮೌನವಹಿಸಿದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಹಾಗೂ ನಮ್ಮ ಪ್ರಸಿದ್ಧ ಪ್ರಧಾನಿ(ಅಮೆರಿಕಾದ ಥಿಂಕ್ ಟಾಂಕ್ ಪಿಇಡಬ್ಲ್ಯು)ಯವರು ಕೂಡ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ದೊಡ್ಡ ವಿಷಯವಿದು ಎಂದು ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.
ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹಿತಾಸಕ್ತಿ ಮತ್ತು ರಾಜಸ್ತಾನದ ರಜಪೂತರ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಶ್ನೆ ಮಾಡುತ್ತಿದ್ದೇನೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.