ಮುಂಬೈ: ವಿವಾದಿತ ಚಿತ್ರ ಪದ್ಮಾವತ್ ನಟನೆಗೆ ತಮ್ಮ ಸಹ ನಟರಾದ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅವರಿಗಿಂತ ಹೆಚ್ಚು ಸಂಭಾವನೆಯನ್ನು ನಟಿ ದೀಪಿಕಾ ಪಡುಕೋಣೆ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಅದನ್ನೀಗ ಹೌದು ಎಂದು ಸ್ವತಃ ದೀಪಿಕಾ ಅವರೇ ಒಪ್ಪಿಕೊಂಡಿದ್ದಾರೆ.
ಖಾಸಗಿ ವಾಹಿನಿಯೊಂದರ ಶೋನಲ್ಲಿ ತಮ್ಮ ಸೋದರಿ ಅನಿಶಾ ಜೊತೆ ಭಾಗವಹಿಸಿದ್ದ ವೇಳೆ ನಟಿ ದೀಪಿಕಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
'ಸೆ ಇಟ್ ಆರ್ ಸ್ಟ್ರಿಪ್ ಇಟ್' ಎಂಬ ಹೆಸರಿನ ಶೋನಲ್ಲಿ ಕಾರ್ಯಕ್ರಮದ ನಿರೂಪಕಿ ನೇಹಾ ದುಪಿಯಾ, ಪದ್ಮಾವತ್ ಚಿತ್ರದಲ್ಲಿ ನೀವು ಎಷ್ಟು ಸಂಭಾವನೆ ತೆಗೆದುಕೊಂಡಿದ್ದೀರಿ? ಎಂದು ನೇರವಾಗಿ ಕೇಳಿದರು.
ಆಗ ದೀಪಿಕಾ ಪ್ರಶ್ನೆಗೆ ಉತ್ತರಿಸಲು ತಪ್ಪಿಸಿಕೊಳ್ಳಲು ನೋಡಿದರು. ಅದರ ಬದಲಿಗೆ ತಮ್ಮ ಕಿವಿಯೋಲೆಯನ್ನು ತೆಗೆಯಲು ಆಯ್ಕೆ ಮಾಡಿಕೊಂಡರು.
ನಂತರ ನೇಹಾ ನೀವು ರಣವೀರ್ ಮತ್ತು ಶಾಹಿದ್ ಗಿಂತ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದೀರಾ ಎಂದು ಕೇಳಿದರು? ಅದಕ್ಕೆ ದೀಪಿಕಾ ಹೌದು ಎಂದು ಉತ್ತರಿಸಿದರು.
ಸಂಜಯ್ ಲೀಲಾ ಬನ್ಸಾಲಿಯವರ ಐತಿಹಾಸಿಕ ಚಿತ್ರ ಪದ್ಮಾವತ್ ಭಾರೀ ವಿವಾದ, ಪ್ರತಿಭಟನೆಗಳ ಮಧ್ಯೆ ನಿನ್ನೆ ಬಿಡುಗಡೆಯಾಯಿತು. 16ನೇ ಶತಮಾನದ ಸೂಫಿ ಕವಿ ಮಲಿಕ್ ಮುಹಮ್ಮದ್ ಜಯಸಿಯವರ ಕವಿತೆ ಪದ್ಮಾವತ್ ನಿಂದ ಆರಿಸಿಕೊಂಡು ಚಿತ್ರ ತಯಾರಿಸಲಾಗಿದ್ದು, ರಜಪೂತರ ಗೌರವ, ಶೌರ್ಯ ಮತ್ತು ತ್ಯಾಗದ ತತ್ವಗಳನ್ನು ಚಿತ್ರದಲ್ಲಿ ವೈಭವೀಕರಿಸಲಾಗಿದೆ.
ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯ ಪಾತ್ರವನ್ನು ನಿರ್ವಹಿಸಿದ್ದಾರೆ.