ಬಾಲಿವುಡ್

ಲಿಂಗರಾಜ ದೇವಸ್ಥಾನದಲ್ಲಿ ಮೊಬೈಲ್ ಬಳಕೆ ನಿಷೇಧ ಬಗ್ಗೆ ಗೊತ್ತಿರಲಿಲ್ಲ: ರವೀನಾ ಟಂಡನ್

Sumana Upadhyaya

ಭುವನೇಶ್ವರ: ಒಡಿಶಾದ ಲಿಂಗರಾಜ ದೇವಸ್ಥಾನದೊಳಗೆ ಕ್ಯಾಮರಾ ಬಳಕೆ ನಿಷೇಧ ವಲಯದಲ್ಲಿ ಜಾಹಿರಾತೊಂದರ ಶೂಟಿಂಗ್ ಮಾಡಿರುವುದಕ್ಕೆ ಬಾಲಿವುಡ್ ನಟಿ ರವೀನಾ ಟೆಂಡನ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತಮ್ಮ ವಿರುದ್ಧ ಕೇಳಿಬಂದಿರುವ ಆರೋಪವನ್ನು ನಟಿ ತಳ್ಳಿಹಾಕಿದ್ದಾರೆ.

ಲಿಂಗರಾಜ ದೇವಸ್ಥಾನದೊಳಗೆ ಯಾವುದೇ ಜಾಹಿರಾತು ಸಂಸ್ಥೆಗಳು ಅಥವಾ ಏಜೆನ್ಸಿಗಳ ಶೂಟಿಂಗ್ ನಡೆಯುತ್ತಿರಲಿಲ್ಲ. ಅದು ಸುಳ್ಳು ಸುದ್ದಿ. ಸ್ಥಳೀಯರು ಮತ್ತು ದೇವಸ್ಥಾನದ ಟ್ರಸ್ಟಿನ ಸದಸ್ಯರು ಮತ್ತೆ ಕೆಲವು ಮಾಧ್ಯಮದವರು ತಮ್ಮ ಮೊಬೈಲ್ ಗಳಲ್ಲಿ ಚಿತ್ರ ತೆಗೆಯುತ್ತಿದ್ದರು ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರಷ್ಟೆ ಎಂದು ಹೇಳಿದ್ದಾರೆ.

ಭುವನೇಶ್ವರದ ಲಿಂಗರಾಜ ದೇವಸ್ಥಾನದೊಳಗೆ ನೋ ಕ್ಯಾಮರಾ ಜೋನ್ ನಲ್ಲಿ ಶೂಟಿಂಗ್ ಮಾಡುತ್ತಿದ್ದರು ಎಂದು ಪೊಲೀಸರು ರವೀನಾ ಟಂಡನ್ ವಿರುದ್ಧ ಕೇಸು ದಾಖಲಿಸಿದ್ದಾರೆ.
ಅಲ್ಲಿ ಕ್ಯಾಮರಾ ಬಳಕೆ ನಿಷೇಧ ವಲಯವಿದೆ ಎಂಬ ಬಗ್ಗೆ ತಮಗೆ ಅರಿವಿರಲಿಲ್ಲ. ಸ್ಥಳೀಯ ಅಧಿಕಾರಿಗಳು ನಮಗೆ ಈ ಬಗ್ಗೆ ಎಚ್ಚರಿಕೆ ನೀಡಲಿಲ್ಲ ಅಥವಾ ಫೊನ್ ಬಳಸಬಾರದೆಂದು ಆಕ್ಷೇಪ ವ್ಯಕ್ತಪಡಿಸಲಿಲ್ಲ. ದೇವಸ್ಥಾನದ ಅಧಿಕಾರಿಗಳು ಈ ವಿಷಯದಲ್ಲಿ ತಳಮಳಗೊಂಡಿದ್ದಾರೆ ಎಂದು ನನಗೆ ಅರ್ಥವಾಗುತ್ತದೆ, ಆದರೆ ಅಲ್ಲಿ ಫೋನ್, ಕ್ಯಾಮರಾ ಬಳಕೆ ನಿಷೇಧವಿತ್ತು ಎಂಬುದು ನನಗೆ ಗೊತ್ತಿರಲಿಲ್ಲ ಎಂಬುದನ್ನು ಅವರು ಪರಿಗಣಿಸಬೇಕೆಂದು ನಟಿ ಮನವಿ ಮಾಡಿದ್ದಾರೆ.

ಅಲ್ಲದೆ ವಿಡಿಯೊ ಮಾಡಿದ್ದ ಹೆಮ್ರಾಜ್ ಜಾಹಿರಾತು ಸಂಸ್ಥೆಯ ಎಲ್.ಎನ್.ಅಗರ್ವಾಲ್ ಮಾತನಾಡಿ, ದೇವಸ್ಥಾನ ಭೇಟಿ ಸಂದರ್ಭದಲ್ಲಿ ರವೀನಾ ಅವರನ್ನು ಭೇಟಿಯಾದೆ. ಪ್ರಸಾದ ತೆಗೆದುಕೊಳ್ಳಲು ಕಾಯುತ್ತಿದ್ದಾಗ ರವೀನಾ ಅವರು ಭುವನೇಶ್ವರದ ಬಿಸಿಲಿನ ಬಗ್ಗೆ ಮಾತನಾಡುತ್ತಿದ್ದರು, ಯಾವುದೋ ಎಲೆಯ ರಸವನ್ನು ಹಚ್ಚಿದರೆ ಚರ್ಮಕ್ಕೆ ಒಳ್ಳೆಯದು ಎಂದು ಹೇಳುತ್ತಿದ್ದರು. ಅದು ಜಾಹಿರಾತು ಶೂಟಿಂಗ್ ಆಗಿರಲಿಲ್ಲ. ದೇವಸ್ಥಾನಕ್ಕೆ ಬಂದ ಇತರ ಭಕ್ತರು ಕೂಡ ಅವರ ಫೋಟೋ ತೆಗೆಯುತ್ತಿದ್ದರು ಎಂದು ಹೇಳಿದ್ದಾರೆ.

SCROLL FOR NEXT