ಮುಂಬಯಿ: ಬಾಲಿವುಡ್ ನಟ ಆಮೀರ್ ಖಾನ್ ಅವರ ಪಾನಿ ಪೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಜಲಮಿತ್ರ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಮಹಾರಾಷ್ಟ್ರ ರಾಜ್ಯದ ನೀರಿನ ಬರವನ್ನು ಶಾಶ್ವತವಾಗಿ ನೀಗಿಸಲು ಭಗೀರಥನಾಗಿರುವ ಬಾಲಿವುಡ್ ನಟ ಆಮಿರ್ ಖಾನ್, ಮುಂದಿನ ಐದು ವರ್ಷಗಳಲ್ಲಿ ಆ ರಾಜ್ಯದಲ್ಲಿನ ಬರವನ್ನು ಸಂಪೂರ್ಣ ನೀಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಂತರರಾಷ್ಚ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 2016ರಲ್ಲಿ ಜಲ ಸಂರಕ್ಷಣೆಗಾಗಿ ತಾವೇ ಸ್ಥಾಪಿಸಿದ್ದ 'ಪಾನಿ ಫೌಂಡೇಷನ್ ' ಮೂಲಕ ಈಗಾಗಲೇ ಹಿವಾರೆ ಬಜಾರ್, ರಾಳೇಗಣ ಸಿದ್ಧಿ, ಹಿವ್ರೆ ಸೇರಿದಂತೆ ಹಲವಾರು ಹಳ್ಳಿಗಳಲ್ಲಿನ ಬರ ನೀಗಿಸಿದ್ದಾರೆ ಆಮೀರ್. ಇದರಿಂದ ಮತ್ತಷ್ಟು ಸ್ಫೂರ್ತಿಗೊಂಡಿರುವ ಅವರು, ಪುಣೆ, ಮುಂಬಯಿ, ನಾಸಿಕ್, ನಾಗ್ಪುರ ಪ್ರಾಂತ್ಯಗಳಲ್ಲಿ ತಮ್ಮ ಫೌಂಡೇಷನ್ ಅಡಿ 'ಜಲ ಮಿತ್ರ' ಎಂಬ ವಿದ್ಯಾರ್ಥಿ ಸಂಘಟನೆ ರಚಿಸಿದ್ದಾರೆ.
ತನ್ನ ಸಂಸ್ಥಾಪನಾ ವರ್ಷದಲ್ಲಿ ಆಯ್ದ 3 ತಾಲೂಕು, 2018ರಲ್ಲಿ 74 ತಾಲೂಕುಗಳಲ್ಲಿನ ಬರವನ್ನು ಶಾಶ್ವತವಾಗಿ ನೀಗಿಸಿ ನೀರು ಹರಿಸಿದ ಹೆಗ್ಗಳಿಕೆ ಪಾನಿ ಫೌಂಡೇಷನ್ನದ್ದು. ಈ ವರ್ಷ, 75 ತಾಲೂಕುಗಳ 4,000ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಜಲ ಸ್ವಾವಲಂಬಿ ಕೈಂಕರ್ಯ ಹಮ್ಮಿಕೊಂಡಿದ್ದಾರೆ.
ಲತೂರ್ ಜಿಲ್ಲೆಯಲ್ಲಿ ನಡೆದ ನೀರಿನ ಸಂರಕ್ಷಣಾ ಕಾರ್ಯಕ್ರಮದಲ್ಲಿ ನಟ ಆಮೀರ್ ಖಾನ್, ಪತ್ನಿ ಕಿರಣ್ ರಾವ್, ಮತ್ತು ನಟಿ ಅಲಿಯಾ ಭಟ್ ಭಾಗವಹಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos