ಬಾಲಿವುಡ್

ಇದು ನನ್ನ ಕೊನೆಯ ಗಣೇಶ ಚತುರ್ಥಿ ಆಚರಣೆ ಆಗುತ್ತೇನೋ? ಗದ್ಗದಿತರಾದ ನಟ ರಣದೀರ್ ಕಪೂರ್!

Vishwanath S
ಬಾಲಿವುಡ್ ನ ಹಿರಿಯ ನಟ ರಣದೀರ್ ಕಪೂರ್ ಗಣೇಶ ಚತುರ್ಥಿಯನ್ನು ಆರ್ ಕೆ ಸ್ಟುಡಿಯೋದಲ್ಲಿ ಆಚರಿಸಿದ್ದು ಇದು ನನ್ನ ಕೊನೆಯ ಗಣೇಶ ಚತುರ್ಥಿ ಆಚರಣೆ ಆಗಲಿದೆ ಎಂದು ಅವರು ಗದ್ಗದಿತರಾಗಿದ್ದಾರೆ. 
ಬಾಲಿವುಡ್ ದಿಗ್ಗಜ ರಾಜ್ ಕಪೂರ್ ಅವರು ನಿರ್ಮಿಸಿದ್ದ ಆರ್ ಕೆ ಸ್ಟುಡಿಯೋ ಬಾಲಿವುಡ್ ನ ಪ್ರಖ್ಯಾತ ಸ್ಟುಡಿಯೋಗಳಲ್ಲಿ ಒಂದಾಗಿದ್ದು ಕಳೆದ 70 ವರ್ಷಗಳ ಇತಿಹಾಸ ಹೊಂದಿದೆ. ಇಂತಹ ಆರ್ ಕೆ ಸ್ಟುಡಿಯೋವನ್ನು ಮಾರಲು ತೀರ್ಮಾನಿಸಿದ್ದು ನಮ್ಮ ಕುಟುಂಬ ತೆಗೆದುಕೊಂಡ ಕಠಿಣ ನಿರ್ಣಯಗಳಲ್ಲಿ ಒಂದಾಗಿದೆ ಎಂದು ರಣದೀರ್ ಕಪೂರ್ ಹೇಳಿದ್ದಾರೆ. 
ಕಪೂರ್ ಕುಟುಂಬ ಆರ್ ಕೆ ಸ್ಟುಡಿಯೋದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರು. ಇನ್ನು ಗಣೇಶನಿಗೆ ಆರತಿ ಮಾಡುವಾಗ ರಣದೀರ್ ಕಪೂರ್ ಗದ್ಗದಿತರಾದರು. ಆರ್ ಕೆ ಸ್ಟುಡಿಯೋದಲ್ಲಿ ಇದು ನಮ್ಮ ಕೊನೆಯ ಗಣೇಶ ಚತುರ್ಥಿ ಆಗಲಿದೆ ಎಂದು ಹೇಳಿದ್ದಾರೆ. 
ಕಳೆದ ವರ್ಷ ಆರ್ ಕೆ ಸ್ಟುಡಿಯೋದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆ ನಂತರ ಕಪೂರ್ ಕುಟುಂಬದ ಸದಸ್ಯರಾದ ರಣದೀರ್ ಕಪೂರ್, ರಿಶಿ ಕಪೂರ್, ರಾಜೀವ್ ಕಪೂರ್ ಸ್ಟುಡಿಯೋವನ್ನು ಮಾರುವ ತೀರ್ಮಾನ ಕೈಗೊಂಡಿದ್ದರು. 
ಇನ್ನು ಸ್ಟುಡಿಯೋವನ್ನು ಮಾರುತ್ತಿರುವ ಬಗ್ಗೆ ಮಾತನಾಡಿದ ರಣದೀರ್ ಕಪೂರ್ ಕಳೆದ ವರ್ಷ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಅಪಾರ ಆಸ್ತಿ ನಷ್ಟವಾಗಿತ್ತು. ಇನ್ನು ಸ್ಟುಡಿಯೋವನ್ನು ಪುನರ್ ನಿರ್ಮಿಸುವ ಕೆಲಸ ನಮ್ಮ ಕೈಯಲ್ಲಿ ಆಗುವುದಿಲ್ಲ ಹೀಗಾಗಿ ನಾವು ಸ್ಟುಡಿಯೋವನ್ನು ಮಾರುವ ತೀರ್ಮಾನಕ್ಕೆ ಬರಲಾಗಿದೆ ಎಂದರು.
SCROLL FOR NEXT