ಮುಂಬೈ: ಪಿಟಿಐ ಸುದ್ದಿಸಂಸ್ಥೆಯ ವರದಿಗಾರರ ಜೊತೆ ಬಾಲಿವುಡ್ ನಟಿ ಕಂಗನಾ ರಾನಾವತ್ ವಾಗ್ವಾದ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಏಕ್ತಾ ಕಪೂರ್ ಅವರ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿಫಿಲ್ಮ್ಸ್ ಬುಧವಾರ ಪತ್ರಕರ್ತರ ಕ್ಷಮೆ ಕೇಳಿದೆ.
ಕಳೆದ ಭಾನುವಾರ ನಡೆದ ಸಮಾರಂಭದಲ್ಲಿ ನಡೆದ ಅಹಿತಕರ ಘಟನೆಗೆ ಕ್ಷಮೆ ಕೋರುವುದಾಗಿ ಬಾಲಾಜಿ ಟೆಲಿಫಿಲ್ಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಮೊನ್ನೆ ಜುಲೈ 7ರಂದು ಸಮಾರಂಭದಲ್ಲಿ ನಮ್ಮ ಚಿತ್ರ ಜಡ್ಜ್ ಮೆಂಟಲ್ ಹೈ ಕ್ಯಾ ಮತ್ತು ಪತ್ರಕರ್ತ ಜಸ್ಟಿನ್ ರಾವ್ ನಡುವೆ ನಡೆದ ಮಾತುಕತೆಗೆ ಸಂಬಂಧಿಸಿದಂತೆ ಹಲವು ರೀತಿಯಲ್ಲಿ ವರದಿಗಳು ಬಂದಿವೆ. ದುರದೃಷ್ಟವಶಾತ್ ಕಾರ್ಯಕ್ರಮ ವಿಕೋಪಕ್ಕೆ ತಿರುಗಿತು.
ಈ ವಿಷಯದಲ್ಲಿ ಭಾಗಿಯಾದ ವ್ಯಕ್ತಿಗಳು ತಮ್ಮ ದೃಷ್ಟಿಕೋನದಲ್ಲಿ ಮಾತನಾಡಿದ್ದಾರೆ. ಆದರೆ ಅದು ನಮ್ಮ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಆಗಿರುವುದರಿಂದ ಚಿತ್ರದ ನಿರ್ಮಾಪಕರಾಗಿ ನಾವು ಈ ಘಟನೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸುತ್ತಿದ್ದು ಕ್ಷಮೆ ಕೋರುತ್ತಿದ್ದೇವೆ. ಯಾರ ಭಾವನೆಗಳಿಗೂ ನೋವುಂಟುಮಾಡುವುದು ಮತ್ತು ಯಾರಿಗೂ ಅಗೌರವ ತೋರಿಸುವುದು ನಮ್ಮ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.