ಮುಂಬೈ: ತನ್ನ ಪೌರತ್ವವನ್ನು ಕುರಿತು ಊಹಾಪೋಹಕ್ಕೆ ತೆರೆ ಎಳೆದ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾನು ಕೆನಡಿಯನ್ ಪಾಸ್ ಪೋರ್ಟ್ ಹೊಂದಿದ್ದೇನೆ. ಆದರೆ ಭಾರತವನ್ನು ಬಲಿಷ್ಟ ರಾಷ್ತ್ರವನ್ನಾಗಿ ಮಾಡುವುದು ನನ್ನಗುರಿ ಎಂದಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರೊಡನೆ ರಾಜಕೀಯೇತರ ಸಂದರ್ಶನವೊಂದನ್ನು ನಡೆಸುವ ಮೂಲಕ ಸುದ್ದಿಯಾಗಿದ್ದ ನಟ ಅಕ್ಷಯ್ ಕುಮಾರ್ ಏಪ್ರಿಲ್ 29 ರಂದು ನಡೆದ ನಾಲ್ಕನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಮುಂಬೈನಲ್ಲಿ ಮತ ಹಾಕಿರಲಿಲ್ಲ. ಇದರಿಂದಾಗಿ ನಟನ ಭಾರತೀಯ ಪೌರತ್ವ ಕುರಿತಂತೆ ಪ್ರಶ್ನೆಗಳೆದ್ದಿದ್ದವು.
ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ನಟ ಅಕ್ಷಯ್ ಕುಮಾರ್ ತಾನು ಕೆನಡಾ ದೇಶದ ಫಾಸ್ ಪೋರ್ಟ್ ಹೊಂದಿದ್ದೇನೆ, ಇದನ್ನು ನಾನೆಂದಿಗೂ ಅಲ್ಲಗೆಳೆದಿಲ್ಲ. ಅಥವಾ ಮುಚ್ಚಿಡಲಿಲ್ಲ ಎಂದಿದ್ದಾರೆ.
"ನನ್ನ ಪೌರತ್ವದ ಬಗ್ಗೆ ವಿನಾಕಾರಣ ಆಸಕ್ತಿ ತಳೆಯುತ್ತಿರುವುದೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಕೆನಡಿಯನ್ ಪಾಸ್ಪೋರ್ಟ್ ಹೊಂದಿದ್ದೇನೆ ಮತ್ತು ಈ ವಿಚಾರವನ್ನು ನಾನೆಂದಿಗೂ ಮುಚ್ಚಿಟ್ಟಿರಲಿಲ್ಲ, ಅಥವಾ ನಿರಾಕರಿಸಲಿಲ್ಲ ಕಳೆದ ಏಳು ವರ್ಷಗಳಲ್ಲಿ ನಾನು ಕೆನಡಾಕ್ಕೆ ಭೇಟಿ ನೀಡಿಲ್ಲ ಎಂಬುದೂ ಸಹ ಸತ್ಯವಾಗಿದೆ.
"ನಾನು ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ನನ್ನ ಎಲ್ಲ ತೆರಿಗೆಗಳನ್ನು ಭಾರತದಲ್ಲಿ ಪಾವತಿಸುತ್ತೇನೆ. ಈ ಎಲ್ಲಾ ವರ್ಷಗಳಲ್ಲಿ ಭಾರತದ ಮೇಲಿನ ನನ್ನ ಪ್ರೀತಿಯನ್ನು ನಾನು ತೋರಿಸಿದ್ದೇನೆ. ಈ ಕುರಿತು ನಾನೆಂದಿಗೂ ಯಾರಿಗೂ ಉತ್ತರಿಸಬೇಕಾದ ಅಗತ್ಯವಿಲ್ಲ. ನನ್ನ ಪೌರತ್ವ ವಿಚಾರವನ್ನು ಅನಗತ್ಯವಾಗಿ ವಿವಾದದ ವಿಷಯವನ್ನಾಗಿಸಲಾಗುತ್ತಿದೆ. ಇದರಿಂಡ ನನಗೆ ಬೇಸರವಾಗಿದೆ. ವ್ಯಕ್ತಿಗತ, ಕಾನೂನುಬದ್ಧ, ರಾಜಕೀಯವಲ್ಲದ, ವಿಚಾರವಾಗಿರುವ ಕಾರಣ ಇದರಿಂಡ ಯಾರ ಮೇಲೆ ಯಾವ ಪರಿಣಾಮವಾಗದು"" ಅಕ್ಷಯ್ ಕುಮಾರ್ ಹೇಳೀದ್ದಾರೆ.