ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ ಹಿಂದಿ ಅವತರಣಿಕೆಯ ಕೌನ್ ಬನೇಗಾ ಕರೋಡ್ಪತಿ(ಕೆಬಿಸಿ)ಯಲ್ಲಿ ಈ ಬಾರಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಭಾಗಿಯಾಗಿದ್ದು, ಬಿಗ್ ಬಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
ಕೆಬಿಸಿಯ 11ನೇ ಆವೃತ್ತಿಯಲ್ಲಿ ಭಾಗಿಯಾಗಿದ್ದ ಸುಧಾಮೂರ್ತಿ ಅವರು ಅಮಿತಾಭ್ ಬಚ್ಚನ್ ಅವರಿಗೆ ದೇವದಾಸಿಯರು ತಯಾರಿಸಿದ ಕೌದಿಯೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಸುಧಾ ಮೂರ್ತಿ ಅವರು ಹೊಸ ಜೀವನ ನೀಡಿದ ದೇವದಾಸಿಯರು ಹೊಲಿದಿರುವ ಕೌದಿ ಇದಾಗಿದೆ.
ಅಮಿತಾಭ್ ಬಚ್ಚನ್ ಅವರು ಸುಧಾ ಮೂರ್ತಿ ನೀಡಿದ ಕೌದಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸುಧಾ ಮೂರ್ತಿ ಅವರು ನನಗೆ ನೀಡಿದ ಈ ಉಡುಗೊರೆ ಈ ಅಧ್ಬುತ ಕಾರ್ಯಕ್ರಮನ್ನು ಯಾವಾಗಲು ನೆನಪಿನಲ್ಲಿ ಇಟ್ಟುಕೊಳ್ಳಲುವಂತೆ ಮಾಡಿದೆ ಎಂದು ಹೇಳಿದ್ದಾರೆ.
"ನಾನು ಸಹ ಸಿನಿ ಪ್ರಿಯಳಾಗಿದ್ದು, ಅಮಿತಾಭ್ ಬಚ್ಚನ್ ಅವರಂತಹ ಮಹಾನ್ ನಟನನ್ನು ಭೇಟಿಯಾಗಿರುವುದು ನನಗೆ ತುಂಬಾ ಸಂತೋಷವಾಗಿದೆ. ಕೆಬಿಸಿಯಲ್ಲಿ ಗೆಲ್ಲುವುದು ಅಥವಾ ಸೋಲ್ಲುವುದು ದೊಡ್ಡ ವಿಷಯವಲ್ಲ. ಆದರೆ ನಾವು ಮಾಡುವ ಕೆಲಸದ ಬಗ್ಗೆ ಜನರಿಗೆ ತಿಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು" ಎಂದು ಸುಧಾ ಮೂರ್ತಿ ಹೇಳಿದ್ದಾರೆ.