ಮುಂಬೈ: ಮೊನ್ನೆಯಷ್ಟೇ ಎಲ್ಲರೂ ಕೊರೋನಾ ತಡೆಗೆ ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ ನೀಡಿದರೂ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ನೀಡಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಅದಕ್ಕೆ ಈಗ ಶಾರುಖ್ ದೇಣಿಗೆ ನೀಡುವ ಮೂಲಕ ಉತ್ತರ ನೀಡಿದ್ದಾರೆ.
ಕೊರೊನಾ ವೈರಸ್ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಮುಂದೆ ಬಂದು ದೇಣಿಗೆ ನೀಡುತ್ತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಟ ಶಾರುಖ್ ಖಾನ್ ಕೂಡ ಹಲವು ಸಮಾಜಮುಖಿ ಕಾರ್ಯಮಾಡಲು ಮುಂದಾಗಿದ್ದಾರೆ.
ಪಿಎಂ ಕೇರ್ಸ್ ಫಂಡ್ಗೆ ಅಕ್ಷಯ್ ಕುಮಾರ್ 25 ಕೋಟಿ ರೂ. ದೇಣಿಗೆ ನೀಡಿದ ಬಳಿಕ ಇನ್ನಿತರ ಸೆಲೆಬ್ರಿಟಿಗಳು ಕೂಡ ಆರ್ಥಿಕ ನೆರವು ನೀಡುತ್ತಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ದಂಪತಿ ತಾವು ನೀಡುತ್ತಿರುವ ದೇಣಿಗೆ ಮತ್ತು ಮಾಡುತ್ತಿರುವ ಕಾರ್ಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 'ಪಿಎಂ ಕೇರ್ಸ್ ಫಂಡ್' ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡುವುದಾಗಿ ಶಾರುಖ್ ಹೇಳಿದ್ದಾರೆ.
ಶಾರುಖ್ ಒಡೆತನದ ರೆಡ್ ಚಿಲ್ಲೀಸ್, ಮೀರ್ ಫೌಂಡೇಶನ್, ಕೊಲ್ಕತ್ತಾ ನೈಟ್ ರೈಡರ್ಸ್ ಮುಂತಾದ ಕಂಪನಿಗಳು ಜೊತೆಯಾಗಿ ಹಲವು ಕಾರ್ಯಗಳನ್ನು ಮಾಡುತ್ತಿವೆ. ಮುಂದಿನ ಒಂದು ತಿಂಗಳ ಕಾಲ ಪ್ರತಿ ದಿನ 3 ಲಕ್ಷ ಆಹಾರದ ಕಿಟ್ಗಳನ್ನು ನೀಡಲಾಗುವುದು. 5,500 ಕುಟುಂಬಗಳಿಗೆ ಹಾಗೂ 2500 ದಿನಗೂಲಿ ನೌಕರರ ಕುಟುಂಬಗಳಿಗೆ ಅಡುಗೆ ಸಾಮಾಗ್ರಿ, 2000 ಬಿಸಿಯೂಟದ ವ್ಯವಸ್ಥೆ ಮಾಡುವುದಾಗಿ ಶಾರುಖ್ ಹೇಳಿದ್ದಾರೆ.