ಸಿನಿಮಾ ಸುದ್ದಿ

ಬಗೆಹರಿಯದ 'ಲಿಂಗಾ' ವಿವಾದ, ೩೪ ಕೋಟಿ ಪರಿಹಾರ ಕೇಳಿದ ವಿತರಕರು

Guruprasad Narayana

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅವರ ಲಿಂಗಾ ಸಿನೆಮಾ ವಿವಾದ ಬಗೆ ಹರಿದಿದೆ ಎಂದುಕೊಳ್ಳುತ್ತಿರುವಾಗಲೇ ಮತ್ತೆ ವಿತರಕರು ಒಗ್ಗೂಡಿದ್ದಾರೆ. ಈ ಹಿಂದೆ ಪರಿಹಾರ ಕೋರಿದ್ದ ವಿತರಕರು ಹಾಗೂ ಚಲನಚಿತ್ರಮಂದಿರ ಮಾಲಿಕರು ಭಾನುವಾರ ಮತ್ತೆ ಸಭೆ ಸೇರುತ್ತಿದ್ದು ನಟ ರಜನಿಕಾಂತ್ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮೇಲೆ ಹೊಸದಾಗಿ ಒತ್ತಡ ತರುವ ಬಗ್ಗೆ ಚಿಂತಿಸಲಿದ್ದಾರೆ.

ರಜನಿಕಾಂತ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ಲಿಂಗಾ ಚಲನಚಿತ್ರವನ್ನು ಕೆ ಎಸ್ ರವಿಕುಮಾರ್ ನಿರ್ದೇಶಿಸಿದ್ದರು. ಇದು ಡಿಸೆಂಬರ್ ೧೨ ರಂದು ಚಲನಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ವಿತರಕರಿಗೆ ಭಾರಿ ಮೊತ್ತಕ್ಕೆ ಈ ಸಿನೆಮಾ ಮಾರಾಟವಾಗಿತ್ತು. ಆದ ಚಲನಚಿತ್ರ ನಿರೀಕ್ಷಿತ ಗಳಿಕೆ ಕಾಣದೆ ಹೋದದ್ದರಿಂದ ವಿತರಕರು ಹಣ ಹಿಂದಿರುಗಿಸುವಂತೆ ರಜನಿಕಾಂತ್ ಅವರನ್ನು ಒತ್ತಾಯಿಸಿದ್ದರು.

ಸದ್ಯಕ್ಕೆ ನಿರ್ಮಾಪಕ ಒಪ್ಪಿಕೊಂಡಿರುವ ಪರಿಹಾರ ಅತಿ ಕಡಿಮೆ ಎಂದಿರುವ ವಿತರಕನೊಬ್ಬ, "ರಜನಿಕಾಂತ್ ಅವರ ಹತ್ತಿರದವರೇ ಆದ ತಿರ್ಪೂರ್ ಸುಬ್ರಮಣಿಯನ್ ಅವರು ನಮಗಾದ ನಷ್ಟದ ಬಗ್ಗೆ ವಿವರವಾಗಿ ಲೆಕ್ಕ ಮಾಡಿದ್ದಾರೆ. ಹೀಗಿದ್ದರೂ ಅವರು ನಮ್ಮ ನಷ್ಟವನ್ನು ಭರಿಸಿಕೊಡಲು ಒಪ್ಪುತ್ತಿಲ್ಲ ಆದುದರಿಂದ ಅವರು ಏರೋಸ್ ಇಂಟರ್ನ್ಯಾಶನಲ್ ನಿಂದ ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಮುಂದಾಗಿದ್ದೇವೆ" ಎನ್ನುತ್ತಾರೆ.

ನಮಗಾಗಿರುವ ನಷ್ಟ ಭರಿಸಿಕೊಡಲು ನಾವು ಕೇಳುತ್ತಿರುವ ಪರಿಹಾರ ಧನ ಕೇವಲ ೩೩.೮೫ ಕೋಟಿ. ನಾವು ಅವರ ಲಾಭದ ಮಾರ್ಜಿನ್ ಕಡಿಮೆ ಮಾಡಿಕೊಳ್ಳಿ ಎಂದಷ್ಟೇ ಕೇಳುತ್ತಿರುವುದು. ಅವರು ಏರೋಸ್ ಇಂಟರ್ನ್ಯಾಶನಲ್ ನಿಂದ ೧೫೭ ಕೋಟಿ ಪಡೆದಿದ್ದಾರೆ ಎಂದು ಕೂಡ ವಿತರಕರು ತಿಳಿಸಿದ್ದಾರೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ವಿತರಕರು ಅನುಭವಿಸಿದ್ದಾರೆ ಎನ್ನಲಾದ ನಷ್ಟದ ೧೦% ಮೊತ್ತವನ್ನು ಭರಿಸಿಕೊಡಲು ಒಪ್ಪಿಕೊಂಡಿದ್ದರು ಎಂದು ತಿಳಿದುಬಂದಿದೆ.

SCROLL FOR NEXT