ಸಿನಿಮಾ ಸುದ್ದಿ

ಬಹು ತಾರಾಗಣದ 'ಚೌಕ'; ಆಕ್ಷನ್ ಕಟ್ ಹೇಳಲು ತರುಣ್ ಸುಧೀರ್ ಸಿದ್ಧತೆ

Guruprasad Narayana

ಬೆಂಗಳೂರು: 'ವಿಕ್ಟರಿ', 'ಅಧ್ಯಕ್ಷ' ಮತ್ತು ಇತ್ತೀಚಿನ 'ರನ್ನ' ನಿರ್ದೇಶಿಸಿದ ಅಣ್ಣ ನಂದ ಕಿಶೋರ್ ನೆರಳಿನಲ್ಲಿ ಬೆಳೆದು ಬಂದಿರುವ ತರುಣ್ ಸುಧೀರ್ ಈಗ ತಮ್ಮದೇ ನಿರ್ದೇಶನದ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ.

ಪ್ರೇಮ್, ಪ್ರಜ್ವಲ್ ದೇವರಾಜ್, ಚಿರಂಜೀವಿ ಸರ್ಜಾ ಮತ್ತು ದಿಗಂತ ಅಭಿನಯದ ಬಹುತಾರಾಗಣದ 'ಚೌಕ' ಚಿತ್ರವನ್ನಿ ನಿರ್ದೇಶಿಸಲು ತರುಣ್ ಸಿದ್ಧತೆ ನಡೆಸುತ್ತಿದ್ದು ಇದು ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ೫೦ನೆಯ ಚಿತ್ರವಾಗಲಿದೆ ಎಂಬ ಹೆಗ್ಗಳಿಕೆ ಕೂಡ ಇದೆ.

ಅಣ್ಣ ನಿರ್ದೇಶಿಸಿದ ಸಿನೆಮಾಗಳಿಗೆ ಸಹಾಯ ಮಾಡುತ್ತಿದ್ದ ತರುಣ್ ಅವರಿಗೆ ಇದು ಹೊಸತೇನಲ್ಲ "ನಾನು ನಂದನಿಗೂ ಮುಂಚಿತವಾಗಿಯೇ ಸಿನೆಮಾ ನಿರ್ದೇಶಿಸಬೇಕಿತ್ತು,. ಶರಣ್ ಅವರ ೧೦೦ ನೆ ಸಿನೆಮಾ ರ್ಯಾಂಬೋ ಕಥೆ ಬರೆದದ್ದು ನಾನೇ ಮತ್ತು ಅದರ ಸಹ ನಿರ್ದೇಶಕ ಕೂಡ. ವಿಕ್ಟರಿ ಕೂಡ ನಾನೇ ನಿರ್ದೇಶಿಸಬೇಕಿತ್ತು ಆದರೆ ಕೆಲವು ಕಾರಣಗಳಿಂದ ಅದನ್ನು ಒಪ್ಪಿಕೊಳ್ಳಲಾಗಲಿಲ್ಲ ಆದುದರಿಂದ ಈ ಯೋಜನೆ ಅಣ್ಣನಿಗೆ ಹೋಯಿತು. ನಾನು ಸ್ಕ್ರೀನ್ ಪ್ಲೇ ಮಾಡಿ, ಸೃಜನಶೀಲ ಮುಖ್ಯಸ್ಥನಾಗಿ ಕೆಲಸ ಮಾಡಿದೆ. ವಿಕ್ಟರಿಯ ನಂತರ ಎಸ್ ಕೃಷ್ಣ ಅವರೊಂದಿಗೆ ಗಜಕೇಸರಿಗೆ ಸ್ಕ್ರೀನ್ ಪ್ಲೇ ಬರೆದು ಸಹ ನಿರ್ದೇಶಕನಾಗಿ ದುಡಿದೆ. ನಂತರ ನಂದನೊಂದಿಗೆ ಅಧ್ಯಕ್ಷ ಮತ್ತು ರನ್ನದಲ್ಲೂ ತೊಡಗಿಸಿಕೊಂಡೆ. ನನಗೆ ಬರಹಗಾರನಾಗಿಯೂ ಅನುಭವವಿದೆ ಹಾಗು ಐದು ಸಿನೆಮಾಗಳಲ್ಲಿ ಕೆಲಸ ಮಾಡಿ ತಾಂತ್ರಿಕ ದೃಷ್ಟಿಯಿಂದಲೂ ಚೊಚ್ಚಲ ನಿರ್ದೇಶಕನಾಗಿ ಪಾದಾರ್ಪಣೆ ಮಾಡಲು ಅಗತ್ಯ ಅನುಭವವಿದೆ" ಎನ್ನುತಾರೆ ತರುಣ್.

ಆಗಸ್ಟ್ ೧೯ ರಂದು ದ್ವಾರಕೀಷ್ ಅವರ ಹುಟ್ಟುಹಬ್ಬದ ದಿನದಂದು ಅಧಿಕೃತ ಘೋಷಣೆ ಹೊರಬೀಳಲಿದೆಯಂತೆ. ಸದ್ಯಕ್ಕೆ ದ್ವಾರಕೀಷ್ ಪ್ರೊಡಕ್ಷನ್ಸ್ ನಲ್ಲಿ ಕೆ ಎಂ ಚೈತನ್ಯ ಅವರ ಆಟಗಾರ ಸಿನೆಮಾ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆಯಾಗಬೇಕಷ್ಟೇ.

ಸುದೀಪ್ ಅವರ ಜೊತೆಗೂ ಮಾತುಕತೆ ನಡೆಸಿದ್ದು ಎಲ್ಲವು ಸುಸೂತ್ರವಾಗಿ ನಡೆದರೆ ಅವರು ಕೂಡ 'ಚೌಕ' ತಂಡ ಸೇರಿಕೊಳ್ಳಲಿದ್ದಾರಂತೆ!



SCROLL FOR NEXT