ಬೆಂಗಳೂರು: ಕರ್ನಾಟಕದಲ್ಲಿ ಚಿತ್ರೀಕರಣಕ್ಕೆ ತೆರಳಿದರೆ ವಿವರಗಳನ್ನು ಕಡ್ಡಾಯವಾಗಿ ವಾರ್ತಾ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೀಡಿ ಅನುಮತಿ ಪಡೆದು ಚಿತ್ರೀಕರಣ ನಡೆಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಥಾಮಸ್ ಡಿಸೋಜ ಹಾಗೂ ನಿರ್ಮಾಪಕ ವಲಯದ ಕಾರ್ಯದರ್ಶಿ ಭಾ.ಮಾ.ಹರೀಶ್ ಅವರು ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಚಿತ್ರೀಕರಣಕ್ಕೆ ಹೋಗುವ ವಿವರಗಳನ್ನು ವಾರ್ತಾ ಇಲಾಖೆ ಹಾಗೂ ವಾಣಿಜ್ಯ ಮಂಡಳಿಗೆ ಒಂದು ವಾರದ ಮುಂಚಿತವಾಗಿ ನೀಡಿ ಅನುಮತಿ ಪಡೆಯಬೇಕು. ಆ ರೀತಿ ಮಾಡುವುರಿಂದ ಅಲ್ಲಿ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ತಮಗೆ ತಿಳಿಯುತ್ತದೆ. ಇದರಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಥಾಮಸ್ ಡಿಸೋಜ ಹೇಳಿದರು. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಹಾಗೂ ನಗರ ಪೊಲೀಸ್ ಆಯುಕ್ತರಿಗೂ ಪತ್ರ ಕಳುಹಿಸುವುದಾಗಿ ಭಾ.ಮಾ. ಹರೀಶ್ ಇದೇ ವೇಳೆ ತಿಳಿಸಿದರು.
ಬಿಸಿಲು ಕುದುರೆ ಚಿತ್ರೀಕರಣಕ್ಕೆಂದು ನಟ-ನಟಿ ಸೇರಿದಂತೆ ಸಹನಟಿಯರ ತಂಡ ಶಿವಮೊಗ್ಗಕ್ಕೆಂದು ತೆರಳಿದ್ದಾಗ ಸಹನಟಿಯೊಬ್ಬರ ಮೇಲೆ ಚಿತ್ರ ನಿರ್ಮಾಪಕ ಎಂದು ಹೇಳಿಕೊಂಡು ಪರಿಚಯಿಸಿಕೊಂಡ ಕುಮಾರ್ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದು ಮುನ್ನೆಚ್ಚರಿಕೆಯಾಗಿ ಈ ನಿರ್ಧಾರಕ್ಕೆ ಬರಲಾಯಿತು.
ಘಟನೆ ವಿವರ
ಬಿಸಿಲುಕುದುರೆ ಚಿತ್ರದ ಚಿತ್ರೀಕರಣಕ್ಕೆಂದು ಮೇ 21ರಂದು ಹೊಸ ನಾಯಕ ಹಾಗೂ ನಾಯಕಿ ಜೊತೆ ತಂಡವೊಂದು ಶಿವಮೊಗ್ಗಕ್ಕೆ ತೆರಳಿತ್ತು. ಸಿನಿಮಾಗಳಿಗೆ ಸಹನಟಿಯರನ್ನು ಪರಿಚಯಿಸುವ ಮಧ್ಯವರ್ತಿ ಉಪ್ಪಿ ಎಂಬುವವರಿಗೆ ಪರಿಚಿತನಾಗಿದ್ದ ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಸೆಕ್ರೆಟರಿ ಎನ್ನಲಾದ ಕುಮಾರ್, ನಾಯಕಿಯ ಫ್ರೆಂಡ್ ಪಾತ್ರದಲ್ಲಿ ನಟಿಸಲು ತೆರಳಿದ್ದ ಸಹನಟಿಗೆ ತಾನು ಈ ಚಿತ್ರದ ನಿರ್ಮಾಪಕ ಎಂದು ಪರಿಚಯಿಸಿಕೊಂಡು ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ಶಿವಮೊಗ್ಗ ಮಹಿಳಾ ಠಾಣೆಗೆ ಸಹನಟಿ ಈಗಾಗಲೇ ದೂರು ನೀಡಿರುವುದರಿಂದ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.