'ಲೈಫ್ ಸೂಪರ್ ಗುರು' ಸಿನೆಮಾದ ಪೋಸ್ಟರ್
ಬೆಂಗಳೂರು: ಸಿನೆಮಾ ಸಂಕಲನಕಾರ ಮತ್ತು ಜಾಹಿರಾತು ನಿರ್ದೇಶಕ ವಿನೋದ್ ಕುಮಾರ್ ಅವರಿಗೆ ಸಿನೆಮಾ ನಿರ್ದೇಶನ ತಲೆಗೆ ಹೊಕ್ಕಾಗ ಅವರು ಆಯ್ಕೆ ಮಾಡಿಕೊಂಡದ್ದು ರಾಜಕೀಯ ಥ್ರಿಲ್ಲರ್. ಚುನಾವಣಾ ಸಮಯದಲ್ಲಿ ನಡೆದ ನೈಜ ಘಟನೆಯೊಂದರ ಆಧಾರಿತ ಸಿನೆಮಾ ಇದಂತೆ.
"ನನಗೆ ಮಾಮೂಲಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಮನಸಿರಲಿಲ್ಲ. ಆಂಬ್ಯುಲೆನ್ಸ್ ಒಂದರಲ್ಲಿ ಬಳ್ಳಾರಿಯಿಂಗ ಬೆಂಗಳೂರಿಗೆ 50 ಕೋಟಿ ಹಣವನ್ನು ಸಾಗಾಣೆ ಮಾಡುತ್ತಿದ್ದ ಕಥೆಯನ್ನು ಪತ್ರಿಕೆಯಲ್ಲಿ ಓದಿದ್ದೆ. ಅದರಿಂದ ಸ್ಫೂರ್ತಿ ಪಡೆದು ನನ್ನ ಸಿನೆಮಾಗೆ ಮೂಲ ಕಥೆ ಬರೆದೆ" ಎನ್ನುತ್ತಾರೆ ವಿನೋದ್.
"ಜೀವನದಲ್ಲಿ ಮೇಲೇಳಲು ಪ್ರಯತ್ನಿಸುತ್ತಿರುವ ಇಬ್ಬರು ಚುನಾವಣಾ ಹಣವನ್ನು ದೋಚುತ್ತಾರೆ. ಅವರು ನಂತರ ಜೀವನದಲ್ಲಿ ಮೇಲೇಳುತ್ತಾರಾ ಎಂಬುದು 'ಲೈಫ್ ಸೂಪರ್ ಗುರು' ಸಿನೆಮಾದ ಕಥೆ" ಎನ್ನುತ್ತಾರೆ ನಿರ್ದೇಶಕ.
ಹೊಸ ನಾಯಕನಟರೊಂದಿಗೆ ಸಿನೆಮಾ ಮಾಡಲಾಗುತ್ತಿದು ಬಳ್ಳಾರಿಯಲ್ಲಿ ಹೊರಾಂಗಣ ಚಿತ್ರೀಕರಣ ನಡೆಸಲಾಗುತ್ತಿದೆ.
"ನಾನು ಬಳ್ಳಾರಿಯಲ್ಲಿ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಕಪ್ಪು ಹಣ ಹೇಗೆ ಕೈಬದಲಾಯಿಸುತ್ತದೆ ಎಂಬುದನ್ನು ತಿಳಿದುಕೊಂಡೆ. ಈ ಹಿನ್ನಲೆಯ ಕಥೆಯ ಜೊತೆಗೆ ಒಂದೊಳ್ಳೆ ಲವ್ ಸ್ಟೋರಿ ಮತ್ತು ಕೌಟುಂಬಿಕ ಡ್ರಾಮಾ ಕೂಡ ಇದೆ" ಎನ್ನುತ್ತಾರೆ ನಿರ್ದೇಶಕನಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿನೋದ್.
ಹೊಸ ಮುಖಗಳಾದ ಲಿಖಿತ್ ಸೂರ್ಯ, ನಿರಂತ್, ಮೇಘನಾ ಮತ್ತು ಅನು ಚಿನ್ನಪ್ಪ ತಾರಾಗಣದಲ್ಲಿದ್ದರೆ, ಹಿರಿಯ ನಟರಾದ ರಂಗಾಯಣ ರಘು ಮತ್ತು ಅಚ್ಯುತ್ ಕುಮಾರ್ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿನೋದ್ ಹೇಳುವಂತೆ ಈ ಹಿರಿಯ ನಟರೇ 'ಲೈಫ್ ಸೂಪರ್ ಗುರು' ಸಿನೆಮಾದ ಮುಖ್ಯಅಂಶ ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos