ಬೆಂಗಳೂರು: ಅಪಾಯದಂಚಿನಲ್ಲಿಯೇ ಕೆಲಸ ಮಾಡುವ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ನವೆಂಬರ್ ೭ ಕರಾಳ ದಿನವಾಗಿ ಮಾರ್ಪಟ್ಟಿತ್ತು. ಅಪಾಯದ ಮುನ್ಸೂಚನೆಯನ್ನು ಕಡೆಗಣಿಸಿ ಮುಂದುವರೆದದ್ದು, ಇಬ್ಬರ ನಟರ ಸಾವಿಗೆ ಕಾರಣವಾಗಿ, ಬಂಧನಗೊಂಡು, ರಾಮನಗರ ಜೈಲಿನಲ್ಲಿ ಒಂದೂವರೆ ತಿಂಗಳು ಕಳೆದು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ದುನಿಯಾ ವಿಜಯ್ ಅಭಿನಯದ 'ಮಾಸ್ತಿ ಗುಡಿ' ಸಿನೆಮಾದ ಚಿತ್ರೀಕರಣದ ವೇಳೆ, ರವಿವರ್ಮಾ ಸಾಹಸನಿರ್ದೇಶನದಲ್ಲಿ ನೀರಿಗೆ ಹಾರಿದ್ದ ಉದಯ್ ಮತ್ತು ಅನಿಲ್ ಅಸುನೀಗಿದ್ದರು.
ವಿಧಿ ನನ್ನ ಬದುಕಿನಲ್ಲಿ ಆಟವಾಡಿದೆ ಮತ್ತು ನರಳುವಂತೆ ಮಾಡಿದೆ ಎನ್ನುವ ರವಿವರ್ಮ "ನಾನು ಇಲ್ಲಿಯವರೆಗೆ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳು ಸೇರಿದಂತೆ ೨೭೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಕೆಲಸ ಮಾಡಿದ್ದೇವೆ. ನನ್ನ ಲೆಕ್ಕಾಚಾರ ಎಂದಿಗೂ ತಪ್ಪಿರಲಿಲ್ಲ. ಆದರೆ 'ಮಾಸ್ತಿ ಗುಡಿ' ಅದನ್ನು ತಪ್ಪಿಸಿತು. ನಾನು ಆರೋಪ-ಪ್ರತ್ಯಾರೋಪ ಮಾಡುತ್ತಿಲ್ಲ. ಆದರೆ ನಾನು ನಿರ್ದೇಶಿಸುತ್ತಿದ್ದ ಸ್ಟಂಟ್ ದೃಶ್ಯಾವಳಿ ಇಡೀ ಚಿತ್ರತಂಡದ ಪರಿಕಲ್ಪನೆಯಾಗಿತ್ತು. ನನ್ನ ಭಾಗದ ಕಥೆಯನ್ನು ವಿವರಿಸಿದರು ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲ. ನಾನು ದೇವರಿಗೆ ಮತ್ತು ಶಿರಡಿ ಸಾಯಿಬಾಬಾರಿಗೆ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅಷ್ಟೆ. ನ್ಯಾಯದಲ್ಲಿ ನನಗೆ ನಂಬಿಕೆ ಇದೆ" ಎಂದು ವಿವರಿಸುತ್ತಾರೆ.
ಮತ್ತೊಬ್ಬರ ತಪ್ಪು ಪ್ರಶ್ನೆಗಳಿಗೆ ಯಾವುದೇ ಸರಿ ಉತ್ತರಗಳಿಲ್ಲ. ಈ ದುರಂತ ಘಟನೆಯಲ್ಲಿ ನಿರ್ಮಾಪಕ ಸುಂದರ್ ಪಿ ಗೌಡ್ರು ಮತ್ತು ನಿರ್ದೇಶಕ ನಾಗಶೇಖರ್ ಹಾಗು ಅವರ ಇಬ್ಬರು ಸಹ ಸಾಹಸ ನಿರ್ದೇಶಕರ ಜೊತೆಗೆ ಸಹ ಆರೋಪಿಯನ್ನಾಗಿ ಮಾಡಿದ ಮೇಲೆ ನನ್ನನ್ನೇ ಹಲವು ಬಾರಿ ಪ್ರಶ್ನಿಸಿಕೊಂಡಿದ್ದೇನೆ ಎನ್ನುವ ಅವರು "ಆ ಕೆಲವು ಕ್ಷಣಗಳಲ್ಲಿ ತಪ್ಪು ಘಟಿಸಿತು, ಮತ್ತು ಏನೋ ಭಯಂಕರವಾದದ್ದು ಸಂಭವಿಸುತ್ತದೆ ಎಂಬ ಊಹೆ ಮನದಲ್ಲಿ ಕಾಡುತ್ತಲೇ ಇತ್ತು. ಆಗಿಲಿಂದಲೂ ನನ್ನನ್ನೇ ಬೈದುಕೊಳ್ಳುತ್ತಿದ್ದೇನೆ" ಎನ್ನುವ ರವಿವರ್ಮ, ಅನಿಲ್ ಮತ್ತು ಉದಯ್ ತಾವು ಉತ್ತಮ ಈಜುಗಾರರಲ್ಲ ಎಂದು ಟಿವಿ ವಾಹಿನಿಗಳಿಗೆ ಹೇಳಿದ್ದಂತೆ ತಂಡಕ್ಕೆ ಹೇಳಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎನ್ನುತ್ತಾರೆ.
"ನಮ್ಮ ಬಳಿ ಇಬ್ಬರು ಡ್ಯೂಪ್ ಗಳು ಇದ್ದರು ಮತ್ತು ಅವರು ಅದ್ಭುತ ಈಜುಗಾರರು. ಆದರೆ ತಮ್ಮ ಗುರುವಿಗಾಗಿ (ದುನಿಯಾ ವಿಜಯ್) ಈ ಸ್ಟಂಟ್ ತಾವೇ ಮಾಡಬೇಕೆಂದು ಅನಿಲ್ ಮತ್ತು ಉದಯ್ ಪಟ್ಟುಹಿಡಿದರು ಮತ್ತು ತಂಡ ಇದಕ್ಕೆ ಒಪ್ಪಿಗೆ ಕೊಟ್ಟಿತು" ಎನ್ನುವ ರವಿವರ್ಮ "ನಾನು ಟ್ಯೂಬ್ ಗಳನ್ನು ಹಾಕಬೇಕೆಂದುಕೊಂಡಿದ್ದೆ, ಆದರೆ ಅದರಿಂದ ಹಾನಿಯಾಗಲಿದೆ ಎಂದು ಹೆಲಿಕ್ಯಾಪ್ಟರ್ ಪೈಲಟ್ ನಿರಾಕರಿಸಿದರು. ಎರಡು ತುಳಿಯುವ ಸೈಕಲ್ ದೋಣಿಗಳು, ಒಂದು ಮೋಟಾರ್ ದೋಣಿ ಮತ್ತು ಐದು ತೆಪ್ಪಗಳಿದ್ದರು ನಾವು ವಿಧಿಯ ಜೊತೆಗೆ ಸೆಣಸಲು ಸಾಧ್ಯವಾಗಲಿಲ್ಲ ಅದುವೇ ಕೇವಲ ೧೦೦ ಮೀಟರ್ ದೂರದಿಂದ" ಎನ್ನುತ್ತಾರೆ ರವಿವರ್ಮ.
ಈ ಅಧ್ಯಾಯದಿಂದ ಪಾಠ ಕಲಿತಿರುವೆ ಎನ್ನುವ ರವಿ ಇನ್ನುಮುಂದೆ ತಂಡದ ಯಾವುದೇ ದುಡುಕು ನಿರ್ಧಾರಗಳಿಗೆ ಓಗೊಡದೆ ಜಾಗರೂಕತೆಯಿಂದ ಕೆಲಸ ನಿರ್ವಹಿಸುವುದಾಗಿ ಹೇಳುತ್ತಾರೆ. "ನಾನು ಎಂದಿಗೂ ನಿರ್ದೇಶಕ ಮತ್ತು ತಂಡಕ್ಕೆ ಬೇಕಂತೆ ಕೆಲಸ ಮಾಡುತ್ತಿದ್ದೆ, ಆದರೆ ಈ ದುರ್ಘಟನೆಯ ನಂತರ ತಂಡದ ಬೇಡಿಕೆಗಳಿಗಿಂತಲೂ ನನ್ನ ಅನುಭವಕ್ಕೆ ಮಹತ್ವ ನೀಡಿ ನಿರ್ಧಾರ ತೆಗೆದುಕೊಳ್ಳೂವುದಕ್ಕೆ ನಿಶ್ಚಯಿಸಿದ್ದೇನೆ" ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos