ದಿನಕರ್ ತೂಗುದೀಪ್, ಬುಲೆಟ್ ಪ್ರಕಾಶ್
ಬೆಂಗಳೂರು: ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಹಾಗೂ ನಿರ್ಮಾಪಕ ದಿನಕರ್ ತೂಗುದೀಪ್ ಅವರ ವಿರುದ್ಧ ದಾಖಲಿಸಿದ್ದ ದೂರನ್ನು ಹಿಂಪಡೆಯುವುದಾಗಿ ಹಾಸ್ಯನಟ ಬುಲೆಟ್ ಪ್ರಕಾಶ್ ಗುರುವಾರ ಹೇಳಿದ್ದಾರೆ.
ನಿನ್ನೆ ರಾತ್ರಿ ದಿನಕರ್ ತೂಗುದೀಪ ಹಾಗೂ ಅವರ ಸಹಚರರು ಕೆಂಪಾಪುರ ಬಳಿಯ ರಾಜನ್ ಸ್ಟುಡಿಯೋ ಮುಂದೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನನ್ನು ಜೀವಂತವಾಗಿರಲು ಬಿಡುವುದಿಲ್ಲ ಅಂತ ಪ್ರಾಣ ಬೆದರಿಕೆ ಹಾಕಿದ್ದರೆ ಎಂದು ಆರೋಪಿಸಿ ಬುಲೇಟ್ ಪ್ರಕಾಶ್ ಅಮೃತಹಳ್ಳಿಯ ಪೊಲೀಸ್ ಠಾಣೆಯಲ್ಲಿ ದಿನಕರ್ ಹಾಗೂ ಪಿಸ್ತಾ ಸೀನಾ ವಿರುದ್ಧ ಕೊಲೆ ಬೆದರಿಕೆ ದೂರು ದಾಖಲಿಸಿದ್ದರು,
ಇಂದು ಪೊಲೀಸ್ ಠಾಣೆಯಲ್ಲಿ ಬುಲೆಟ್ ಪ್ರಕಾಶ್ ಹಾಗೂ ದಿನಕರ್ ತೂಗುದೀಪ್ ನಡೆವು ಸಂಧಾನ ಸಭೆ ನಡೆಸಲಾಯಿತು.
ಸಂಧಾನ ಸಭೆ ಯಶಸ್ವಿಯಾಗಿದ್ದು, ಸಭೆಯ ಬಳಿಕ ಮಾತನಾಡಿದ ಬುಲೆಟ್ ಪ್ರಕಾಶ್, ನಮ್ಮ ಮಧ್ಯೆ ಕೆಲವು ಗೊಂದಲಗಳಿದ್ದವು. ಸಂಧಾನ ಸಭೆಯಲ್ಲಿ ಶೇ.95ರಷ್ಟು ಗೊಂದಲಗಳಿಗೆ ಪರಿಹಾರ ಸಿಕ್ಕಿದೆ. ಹೀಗಾಗಿ ಇಂದು ಅಥವಾ ನಾಳೆ ದೂರು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ.
ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾ ಸೆಟ್ನಲ್ಲಿ ದಿನಕರ್ ತೂಗುದೀಪ ಬುಲೆಟ್ ಪ್ರಕಾಶ್ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರಂತೆ. ಈ ವಿಷಯ ತಿಳಿದ ಬುಲೆಟ್ ಪ್ರಕಾಶ್ ಫೋನ್ ಮಾಡಿ ಮಾತನಾಡಿದಾಗ ದಿನಕರ್ ಬಾಯಿಗೆ ಬಂದಂತೆ ಬುಲೆಟ್ ಪ್ರಕಾಶ್ಗೆ ಬೈದಿದ್ದಾರೆ.
ಅಲ್ಲದೇ ಸಿನಿಮಾವೊಂದಕ್ಕೆ ದರ್ಶನ್ ಡೇಟ್ ಪಡೆದಿದ್ದರಿಂದ ಆಕ್ರೋಶಗೊಂಡಿರುವ ದಿನಕರ್, ಬುಲೆಟ್ ಪ್ರಕಾಶ್ ಅದು ಹೇಗೆ ಸಿನಿಮಾ ಮಾಡುತ್ತಾನೆ ನೋಡುತ್ತಿನಿ ಅಂತೆಲ್ಲಾ ಕೆಟ್ಟದಾಗಿ ಮಾತನಾಡಿದ್ದಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ದಿನಕರ್ ಬುಲೆಟ್ ಪ್ರಕಾಶ್ ಮನೆಯ ಬಳಿ ಬರುವುದಾಗಿ ತಿಳಿಸಿದರು. ಆದರೆ ಮನೆ ಬಳಿ ಬರಲು ಒಪ್ಪದ ಬುಲೆಟ್ ಪ್ರಕಾಶ್ ರಾಜನ್ ಸ್ಟುಡಿಯೋ ಬಳಿ ಬರಲು ತಿಳಿಸಿದ್ದರು. ಇಲ್ಲಿಗೆ ದಿನಕರ್ ಹಾಗೂ ಅವರ ಸಹಚರರು ಬುಲೆಟ್ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos