ನವದೆಹಲಿ: 'ಉಡ್ತಾ ಪಂಜಾಬ್' ನಿಂದ ಪಂಜಾಬ್ ಹೊರಬಿದ್ದರೆ ಹೇಗೆ? ರಾಜಕೀಯ ಒತ್ತಡಕ್ಕೆ ಮಣಿದಿರುವ ಸೆನ್ಸಾರ್ ಮಂಡಳಿ, ಶಾಹಿದ್ ಕಪೂರ್ ನಟನೆಯ ಈ ಸಿನೆಮಾದ ಕಥೆ ಪಂಜಾಬ್ ನಲ್ಲಿ ನಡೆಯುವುದು ಬೇಡ ಎಂಬ ಅಭಿಪ್ರಾಯ ತಳೆದಿದೆ ಎನುತ್ತವೆ ಮೂಲಗಳು.
ಅಭಿಷೇಕ್ ಚೌಬೆ ನಿರ್ದೇಶನದ ಈ ಸಿನೆಮಾಗೆ ಪ್ರಮಾಣ ಪತ್ರ ನೀಡಲು ಈ ಹಿಂದೆ ಸೆನ್ಸಾರ್ ಮಂಡಳಿ ನಿರಾಕರಿಸಿದ್ದರಿಂದ ಪರಿಶೀಲನಾ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಈಗ ಇನ್ನೂ ಕಠಿಣ ಸಲಹೆಗಳನ್ನು ನೀಡಿರುವ ಈ ಸಮಿತಿ, ಪ್ರಮಾಣ ಪತ್ರ ಬೇಕಾದರೆ, ಸಿನೆಮಾ ಕಥೆ ಪಂಜಾಬ್ ನಲ್ಲಿ ನಡೆದಿಲ್ಲ ಎಂಬುವಂತೆ ಬದಲಾವಣೆಗಳನ್ನು ಮಾಡಲು ಸೂಚಿಸದೆ.
ಪರಿಶೀಲನಾ ಸಮಿತಿಯ ಸಲಹೆಗಳು/ತಕರಾರುಗಳು ಈಗ ರಾಜಕೀಯ ಬಣ್ಣ ಪಡೆದಿವೆ. ಪಂಜಾಬ್ ಗಿಂತಲೂ ಯಾವುದಾದರೂ ಕಾಲ್ಪನಿಕ ಪ್ರದೇಶದಲ್ಲಿ ಕಥೆ ನಡೆಯುವಂತೆ ಸೂಚಿಸಲು ಹಲವಾರು ಕಟ್ ಗಳನ್ನು-ಬದಲಾವಣೆಗಳನ್ನು ಸೆನ್ಸಾರ್ ಮಂಡಳಿ ಸೂಚಿಸಿದೆ.
ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯ ಬಗೆಗಿನ ಈ ಚಿತ್ರ ಪಂಜಾಬ್ ಗೆ ಅವಮಾನ ಮಾಡಲಿದೆ ಎಂದು ಪರಿಶೀಲನಾ ಸಮಿತಿ ಅಭಿಪ್ರಾಯ ತಳೆದಿದೆ.
ಇದಕ್ಕೂ ಮುಂಚೆ ಪಂಜಾಬ್ ನ ಆಡಳಿತ ಪಕ್ಷ ಆಕಾಲಿ ದಳ ಈ ಸಿನೆಮಾಗೆ ಆಕ್ಷೇಪ ಎತ್ತಿತ್ತು. ಮುಂದಿನ ವರ್ಷ ಪಂಜಾಬ್ ಚುನಾವಣೆಗಳು ನಡೆಯುವುದರಿಂದ, ಸೆನ್ಸಾರ್ ಮಂಡಲಿ ಮೇಲೆ ರಾಜಕೀಯ ಪಕ್ಷಗಳು ರಾಜಕೀಯ ಪಕ್ಷಗಳು ಪ್ರಭಾವ ಬೀರಿವೆ ಎನ್ನಲಾಗಿದೆ.
ಶಾಹಿದ್ ಕಪೂರ್ ಅವರೊಂದಿಗೆ, ಆಲಿಯಾ ಭಟ್, ಕರೀನಾ ಕಪೂರ್ ಕೂಡ ನಟಿಸಿರುವ ಈ ಸಿನೆಮಾ ಜೂನ್ ೧೭ಕ್ಕೆ ಬಿಡುಗಡೆಯಾಗಬೇಕಿದೆ.