ಬೆಂಗಳೂರು: ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಮಾಗಡಿ ರಸ್ತೆಯಲ್ಲಿರುವ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ ಖಳನಟರಾದ ಅನಿಲ್ ಮತ್ತು ಉದಯ್ ಅವರು ನೀರಿನಿಂದ ಮೇಲಕ್ಕೆ ಬಾರದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಯ್. ಅನಿಲ್ ಹಾಗೂ ಉದಯ್ ಮೂವರು ಹೆಲಿಕಾಪ್ಟರ್ ನಿಂದ ಕೆರೆಗೆ ಜಿಗಿಯುತ್ತಾರೆ. ಇವರಲ್ಲಿ ದುನಿಯಾ ವಿಜಯ್ ಈಜಿದ್ದು ಅವರನ್ನು ತೆಪ್ಪದ ಮೂಲಕ ದಡಕ್ಕೆ ಕರೆತರಲಾಗಿದೆ. ಆದರೆ ಅನಿಲ್ ಮತ್ತು ಉದಯ್ ಈಜಲು ಬರದೇ ನೀರು ಪಾಲಾಗಿದ್ದಾರೆ. ಚಿತ್ರತಂಡದ ನಿರ್ಲಕ್ಷವೇ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿಶಾಮ ಸಿಬ್ಬಂದಿ, ಪೊಲೀಸರು ಹಾಗೂ ಈಜು ತಜ್ಞರು ಆಗಮಿಸಿದ್ದು ನಟರ ಮೃತದೇಹಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ.
ಇಂದು ಮಧ್ಯಾಹ್ನ ಸುಮಾರು 2.45ರ ಸುಮಾರಿಗೆ ಕೆರೆಗೆ ಜಿಗಿದಿದ್ದ ಅನಿಲ್ ಹಾಗೂ ಉದಯ್ ಅವರು ಮೃತಪಟ್ಟಿರುವುದಾಗಿ ತಾವರಕೆರೆ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಚಿತ್ರ ತಂಡದ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದಾರೆ.
ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಾಸ್ತಿಗುಡಿಗಾಗಿ ರವಿವರ್ಮಾ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಈ ಸಾಹಸಕ್ಕಾಗಿ ಅನಿಲ್ ಅವರು ಭಾರಿ ಕಸರತ್ತು ನಡೆಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos