ಬೆಂಗಳೂರು: ಗಣಿ ಧಣಿ, ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿಯವರ ಪುತ್ರಿ ಬ್ರಹ್ಮಿಣಿ ಅವರ ವೈಭವಪೂರಿತ ಬಹುಕೋಟಿ ವೆಚ್ಚದ ಮದುವೆ ಕರ್ನಾಟಕಾದಾದ್ಯಂತ ಅತಿ ಚರ್ಚಿತ ವಿಷಯ. ಈಗ ಅವರ ಪುತ್ರ ಕೀರ್ತಿ ರೆಡ್ಡಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.
"೧೯ ವರ್ಷಗಳ ಹಿಂದೆ ನಿರ್ದೇಶಕ ಅಥವಾ ನಟನಾಗಲು ಜನಾರ್ಧನ್ ರೆಡ್ಡಿ ಚೆನ್ನೈಗೆ ತೆರಳಿದ್ದರು. ಅವರು ಮೂರು ತಿಂಗಳ ನಟನಾ ತರಬೇತಿಯನ್ನು ಕೂಡ ಪಡೆದಿದ್ದರು. ತೆಲುಗು ಚಿತ್ರನಿರ್ದೇಶಕ ಕೋದಂಡರಾಮಿ ರೆಡ್ಡಿ ಅವರ ಕೈಕೆಳಗೆ ಸಹಾಯಕನಾಗಿ ಆರು ತಿಂಗಳು ಕೆಲಸ ಕೂಡ ಮಾಡಿದ್ದರು. ಆದರೆ ಅವರು ಬಳ್ಳಾರಿಗೆ ಹಿಂದಿರುಗಿ ಉದ್ದಿಮೆ ಮತ್ತು ರಾಜಕೀಯಕ್ಕೆ ಇಳಿದ ಮೇಲೆ ಸಿನೆಮಾ ರಂಗ ದೂರವಾಯಿತು. ಇತ್ತೀಚಿನ ಮದುವೆಯಲ್ಲಿ ಅವರು ಈ ವಿಷಯವನ್ನು ಬಿಚ್ಚಿಟರು" ಎಂದು ತಿಳಿಸುತ್ತವೆ ಮೂಲಗಳು.
ಕಳೆದ ೧೨ ವರ್ಷಗಳಿಂದ ಕೀರ್ತಿ ನೃತ್ಯ ತರಬೇತಿ ಪಡೆಯುತ್ತಿದ್ದು, ಈಗ ಕುದುರೆ ಓಡಿಸುವುದನ್ನು ಕಲಿಯುತ್ತಿದ್ದಾರಂತೆ. ಇದಕ್ಕಾಗಿ ಅವರು ಆಗಾಗ ಹೈದರಾಬಾದ್ ಗೆ ಪ್ರಯಾಣ ಬೆಳೆಸುತ್ತಿರುತ್ತಾರಂತೆ. ಅವರು ಬೈಕ್ ಓಡಿಸುವುದರಲ್ಲಿ, ವೀಲಿಂಗ್ ಮಾಡುವುದರಲ್ಲಿ ಪರಿಣಿತರು ಎನ್ನುತ್ತವೆ ಮೂಲಗಳು.
ಸದ್ಯಕ್ಕೆ ದ್ವಿತೀಯ ಪಿಯುಸಿ ಓದುತ್ತಿರುವ ಕೀರ್ತಿ ತಮ್ಮ ಸಿನೆಮಾ ವೃತ್ತಿಜೀವನದ ಬಗ್ಗೆ ಖಚಿತವಾಗಿದ್ದಾರೆ. "ಅದಕ್ಕೂ ಮುಂಚಿತವಾಗಿ ಅವರು ಸಿನೆಮಾ ಮಾಡುವುದರ ಬಗ್ಗೆ ತರಬೇತಿ ಪಡೆಯಲಿದ್ದಾರೆ. ಅದಕ್ಕಾಗಿ ಅವರ ತಂದೆ ಅವಕಾಶ ಮಾಡಿಕೊಡಲಿದ್ದಾರೆ" ಎನ್ನುತ್ತವೆ ಮೂಲಗಳು.
ಈಮಧ್ಯೆ ಜನಾರ್ಧನ್ ರೆಡ್ಡಿ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ. ಅವರ ಬ್ಯಾನರ್ ಅಡಿ ಸಾಯಿಕುಮಾರ್ ಅವರ ಪುತ್ರ ಆದಿ ಅವರನ್ನು ಕನ್ನಡ ಸಿನೆಮಾದ ಮೂಲಕ ಪರಿಚಯಿಸಲಿದ್ದಾರಂತೆ. ಮುಂದಿನ ಸಂಕ್ರಾಂತಿಗೆ ಮುಹೂರ್ತ ಏರ್ಪಡಿಸಲಾಗುತ್ತದೆ ಎನ್ನುತ್ತವೆ ಮೂಲಗಳು.
"೮ ತಿಂಗಳ ಅಂತರದಲ್ಲಿ ಮಾಜಿ ಸಚಿವ ಮೂರೂ ನಾಲ್ಕು ಸಿನೆಮಾಗಳನ್ನು ನಿರ್ಮಿಸುವ ಸಾಧ್ಯತೆ ಇದೆ. ಈ ನಡುವೆ ಸಿನೆಮಾವನ್ನು ಕೀರ್ತಿ ಚೆನ್ನಾಗಿ ಕಲಿಯಬೇಕು ಎಂಬುದು ಅವರಾಸೆ ಎನ್ನುವ ಮೂಲಗಳು "ಕೀರ್ತಿ ವಿದ್ಯಾಭ್ಯಾಸದ ನಂತರವಷ್ಟೇ ಸಿನಿಮಾರಂಗ ಪ್ರವೇಶಿಸಲಿದ್ದಾರೆ" ಎನ್ನುತ್ತವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos